ಉಡುಪಿ: ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪ್ರಚಾರ ಪುಸ್ತಕದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಭಾವಚಿತ್ರದ ಬದಲು ಬಿಜೆಪಿ ನಾಯಕನ ಫೋಟೋ ಹಾಕಿ ಕಾಂಗ್ರೆಸ್ ಪಕ್ಷ ಮುಜುಗರಕ್ಕೊಳಗಾಗಿದೆ. ಜೂನ್ 3 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ.ಕೆ.ಕೆ.ಮಂಜುನಾಥ್ ಕುಮಾರ್ ಪ್ರಚಾರ ಪುಸ್ತಕದಲ್ಲಿ ಬಿಜೆಪಿ ನಾಯಕನ ಫೋಟೋ ಹಾಕಲಾಗಿದೆ.
ಪ್ರಚಾರ ಪುಸ್ತಕದಲ್ಲಿ ಕಾರ್ಕಳ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಫೋಟೋ ಬದಲು ಬಿಜೆಪಿ ಮಂಗಳೂರು ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಫೋಟೋ ಹಾಕಲಾಗಿದೆ. ಒಟ್ಟು ಆರು ಪುಟಗಳ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಲವು ನಾಯಕರ ಫೋಟೋಗಳನ್ನು ಮುದ್ರಿಸಲಾಗಿದೆ. ಇದರ ಐದನೇ ಪುಟದಲ್ಲಿ ಕಾಂಗ್ರೆಸ್ ಮುಖಂಡರ ಫೋಟೋ ನಡುವೆ ಬಿಜೆಪಿ ಮುಖಂಡ ಉದಯಕುಮಾರ್ ಶೆಟ್ಟಿಯವರ ಫೋಟೋ ಕೂಡ ರಾರಾಜಿಸ್ತಾ ಇದೆ.
ಈಗಾಗಲೇ ಕಾಂಗ್ರೆಸ್ ಪಕ್ಷ ಸಾವಿರಾರು ಪ್ರಚಾರ ಪುಸ್ತಕ ಮುದ್ರಿಸಿ ಹಂಚಿದೆ. ಪ್ರಚಾರ ಪತ್ರದಲ್ಲಿನ ಈ ಎಡವಟ್ಟು ಭಾರೀ ಚರ್ಚೆಗೂ ಗ್ರಾಸವಾಗಿದೆ. ಗೂಗಲ್ನಲ್ಲಿ ಸರ್ಚ್ ಮಾಡಿ ಫೋಟೋ ಹಾಕಿದ್ರಿಂದ ಈ ರೀತಿ ಎಡವಟ್ಟು ಆಗಿದೆ ಅಂತ ಹೇಳಲಾಗಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ತೀರಾ ಮುಜುಗರಕ್ಕೊಳಪಡಿಸಿದೆ.