ಕೊಟ್ಟಿಗೆಹಾರ: ಬಣಕಲ್ ಗುಡ್ಡಟ್ಟಿ ರಸ್ತೆ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡ ಕೆಲ ತಿಂಗಳೊಳಗೆ ಕಿತ್ತು ಬಂದಿದ್ದು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಇಲ್ಲದಿದ್ದರೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಎಂದು ಕುವೆಂಪು ನಗರ ಗುಡ್ಡಟ್ಟಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.
ಸ್ಥಳಕ್ಕೆ ಭೇಟಿ ನೀಡಿದ ಪಿಡಬ್ಲೂಡಿ ಇಂಜಿನಿಯರ್ ನಂಜುಂಡಯ್ಯ ಅವರನ್ನು ಗ್ರಾಮಸ್ಥರು ರಸ್ತೆ ಕಳಪೆ ಕಾಮಗಾರಿ ಬಗ್ಗೆ ತರಾಟೆಗೆ ತೆಗೆದುಕೊಂಡರು.
ಗುಡ್ಡಟ್ಟಿ ಗ್ರಾಮಸ್ಥ ಅರುಣ್ ಪೂಜಾರಿ ಮಾತನಾಡಿ, ಶಾಸಕರ ಅನುದಾನದಲ್ಲಿ ಗುತ್ತಿಗೆದಾರರಾದ ಮರೇಬೈಲು ಮನು ಎಂಬುವವರು ಕಾಂಕ್ರೀಟ್ ರಸ್ತೆಯನ್ನು 2022 ಏಪ್ರಿಲ್ ತಿಂಗಳಲ್ಲಿ ನಿರ್ಮಿಸಿದ್ದರು. ಕಳಪೆ ಕಾಮಗಾರಿ ಆದ ಕಾರಣ ಅದೇ ವರ್ಷದ ಮಳೆಗೆ ರಸ್ತೆ ಸಂಪೂರ್ಣ ಹಾಳಾಗಿತ್ತು. ಕೂಡಲೇ ಗುತ್ತಿಗೆದಾರರನ್ನು ಕರೆಸಿ ಸರಿಪಡಿಸಲು ಒತ್ತಾಯಿಸಿದ್ದೆವು. ಮಳೆ ಕಡಿಮೆಯಾದ ಕೂಡಲೆ ಸರಿಪಡಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಮೂರು ವರ್ಷ ಕಳೆದರೂ ರಸ್ತೆ ದುರಸ್ಥಿ ಆಗದ ಕಾರಣ ಲೋಕಾಯುಕ್ತರ ಭೇಟಿಗೆ ಅನುಮತಿ ಕೇಳಿದ್ದೇವೆ. ರಸ್ತೆ ದುರಸ್ಥಿ ಆಗದೇ ಇದ್ದರೇ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದರು.
ಚುನಾವಣಾ ಹೊತ್ತಿನಲ್ಲಿ ಕಾಮಗಾರಿಗಳ ಗುಣಮಟ್ಟ ಯಾವ ರೀತಿ ಇರಲಿದೆ ಎಂಬುದಕ್ಕೇ ಗುಡ್ಡಹಟ್ಟಿ ರಸ್ತೆ ಒಂದು ನಿದರ್ಶನವಾಗಿದೆ. ಕಾಂಕ್ರಿಟ್ ಹಾಕಿದ ಕೆಲವೇ ತಿಂಗಳಲ್ಲಿ ರಸ್ತೆ ಕಿತ್ತು ಬಂದಿದೆ. ಕಡಿಮೆ ಸಿಮೆಂಟ್ ಮತ್ತು ಕಡಿಮೆ ಗುಣಮಟ್ಟದ ಡಸ್ಟ್ ರೀತಿಯ ಎಂಸ್ಯಾಂಡ್ ಬಳಕೆ ಮತ್ತು ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂಜಿನಿಯರ್ ನಂಜುಂಡಯ್ಯ ಮಾತನಾಡಿ 2026 ರ ಜನವರಿ ಅಂತ್ಯದ ಒಳಗೆ ರಸ್ತೆ ದುರಸ್ತಿ ಮಾಡಿ ಕೊಡಲಾಗುವುದು ಎಂದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು ಮಾತು ತಪ್ಪಿದರೆ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
