ಮೂಡಿಗೆರೆ: ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಪ.ಪಂ.ಗೆ ಸೇರಿದ ವಾಣಿಜ್ಯ ಮಳಿಗೆಯೊಂದನ್ನು ಬೇರೆಯವರಿಗೆ ನೀಡಿದ್ದ ಅಧಿಕಾರಿಗಳಿಗೆ 1.ಲಕ್ಷ ರೂ ದಂಡ ವಿಧಿಸಿದ್ದಲ್ಲದೇ 1 ತಿಂಗಳಲ್ಲಿ ಫಲಾನುಭವಿಗೆ ಹಸ್ತಾಂತರಿಸಬೇಕೆಂದು ಹೈ ಕೋರ್ಟ್ ತೀರ್ಪು ನೀಡಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿ.ಕೆ.ಲಕ್ಷ್ಮಣ್ ಕುಮಾರ್ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 6 ವರ್ಷದ ಹಿಂದೆ ಪ.ಪಂ.ಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡುವ ಪ್ರಕ್ರಿಯೆ ನಡೆದಿತ್ತು. ಆಗ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ಮೀಸಲಿಟ್ಟ ಪಟ್ಟಣದ ಪೊಲೀಸ್ ಠಾಣೆ ಎದುರಿನಲ್ಲಿರುವ ಕಟ್ಟದ 1 ಮಳಿಗೆಯನ್ನು ಹರಾಜು ಪ್ರಕ್ರಿಯಲ್ಲಿ ಎಸ್ಸೀ ಜನಾಂಗದ ವ್ಯಕ್ತಿ ಪಡೆದುಕೊಂಡಿದ್ದರು. ಆದರೆ 6 ವರ್ಷ ಕಳೆದರೂ ಮಳಿಗೆ ಹಸ್ತಾಂತರ ಮಾಡದೇ ಅಧಿಕಾರಿಗಳು ಬೇರೆಯವರಿಗೆ ನೀಡಿದ್ದರು. ಇದನ್ನು ಪ್ರಶ್ನಿಸಿ ಫಲಾನುಭವಿ ಕಾನೂನು ಸಮರ ನಡೆಸಿದ ಫಲವಾಗಿ ಇದೀಗ ಹೈಕೋರ್ಟ್ ಬಡ ದಲಿತರ ಪರವಾಗಿ ತೀರ್ಪು ನೀಡಿದೆ ಎಂದು ಹೇಳಿದರು.
ಬಿ.ಹೊಸಳ್ಳಿ ಗ್ರಾ.ಪಂ. ಸದಸ್ಯ ಶಿವಪ್ರಸಾದ್ ಮಾತನಾಡಿ, ಮೀಸಲು ಕ್ಷೇತ್ರದಲ್ಲಿ ಇಂತಹ ಪ್ರಕರಣ ನಡೆದಿರುವ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಸ್ಥಿತಿ ಉಂಟಾಗಿರುವುದು ನಾಚಿಗೇಡಿನ ಸಂಗತಿ. ಕಾನೂನು ಹೋರಾಟದಿಂದಾಗಿ ಬಡ ದಲಿತರಿಗೆ ಮಳಿಗೆ ಹಸ್ತಾಂತರಿಸಲು ಹಾಗೂ ವಿಳಂಬ ಮಾಡಿರುವ ಅಧಿಕಾರಿಗಳಿಗೆ 1 ಲಕ್ಷ ರೂ ದಂಡ ವಿಧಿಸಿದ್ದಲ್ಲದೇ ಒಂದು ತಿಂಗಳಲ್ಲಿ ಬಿಡ್ಡುದಾರರಿಗೆ ಮಳಿಗೆ ನೀಡಬೇಕೆಂದು ನ್ಯಾಯಾಲಯ ತೀರ್ಪು ನೀಡಿದ್ದರಿಂದ ಸತ್ಯಕ್ಕೆ ನ್ಯಾಯ ಸಿಕ್ಕಿದೆ. ಇನ್ನಾದರೂ ಪ.ಪಂ. ಆಡಳಿತ ವರ್ಗ ಎಚ್ಚೆತ್ತುಕೊಂಡು ಸಾಂವಿಧಾನಿಕ ಕಾನೂನಿನ ಅನ್ವಯ ಕಾರ್ಯ ನಿರ್ವಹಿಸುವಂತಾಗಬೇಕು. ಅಲ್ಲದೇ 1 ತಿಂಗಳಲ್ಲಿ ಅರ್ಹ ಫಲಾನುಭವಿಗೆ ಮಳಿಗೆ ನೀಡಬೇಕೆಂದು ಆಗ್ರಹಿಸಿದರು.
ಸುದ್ದಿ ಗೋಷ್ಠಿಯಲ್ಲಿ ಸಿಪಿಐ ತಾಲೂಕು ಅಧ್ಯಕ್ಷ ಕೆಳಗೂರು ರಮೇಶ್, ಸಹಕಾರ್ಯದರ್ಶಿ ರಾಜು ಬಾನಳ್ಳಿ, ಯುವಜನ ಸಂಘಟನೆ ಮುಖಂಡ ಜಗದೀಶ್ ಚಕ್ರವರ್ತಿ ಉಪಸ್ಥಿತರಿದ್ದರು.
