ಮೂಡಿಗೆರೆ: ಜಗತ್ತಿನಲ್ಲಿ ಸತ್ಯವೊಂದೇ ಮಾರ್ಗ ಅನೇಕ ದೇವರು ಒಬ್ಬನೇ ನಾಮರೂಪಗಳು ಹಲವು ಇದು ನಮ್ಮ ಸನಾತನ ಧರ್ಮದ ಸಾರವಾಕ್ಯವಾಗಿದೆ. ಇದೊಂದು ಅರಿತಿದ್ದರೆ ಹಿಂದೂ ಧರ್ಮ ಅರ್ಥವಾಗುತ್ತದೆ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಸಂಜೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಏರ್ಪಡಿಸಿದ್ದ ದತ್ತಮಾಲಾ ಸಂಕೀರ್ತನಾ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಭಾರತೀಯ ಸಂಸ್ಕೃತಿ ಎಂಬುದು ಸದಾ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂಸ್ಕೃತಿಯಾಗಿದೆ. ಈ ಸಂಸ್ಕೃತಿಯಲ್ಲಿ ವಿಕಾಸವಾದ ಧರ್ಮವೇ ಸನಾತನ ಧರ್ಮ. ನಮ್ಮ ದೇಶ ಕಟ್ಟಲು ಹಾಗೂ ಸಂಸ್ಕೃತಿ ಉಳಿಸಲು ಪರಸ್ಪರ ಪ್ರೀತಿ ವಿಶ್ವಾಸ, ಸಮನ್ವಯ ದೃಷ್ಟಿಯಿಂದ ಸಾಧ್ಯವೇ ಹೊರತು, ಧ್ವೇಷ, ಅಸೂಹೆ, ಸಂಘರ್ಷದಿಂದ ಸಾಧ್ಯವಿಲ್ಲ ಎಂದ ಅವರು, ಹಿಂದೂ ಎಂಬುದು ಭೌಗೋಳಿಕವಾಗಿ ಬಂದ ಪದ. ಮೂಲತಃ ಇದು ಸನಾತನ ಧರ್ಮವೆಂದು ಅರಿತುಕೊಳ್ಳಬೇಕೆಂದು ಹೇಳಿದರು.
ಗೋರಕ್ಷ ಪ್ರಮುಖ್ ಮುರುಳಿಕೃಷ್ಣ ಮಾತನಾಡಿ, ಹಿಂದೂ ಸಮಾಜ ಗಟ್ಟಿಯಾಗಿ ಸಂಕಲ್ಪ ಮಾಡಿದರೆ ಮುಂದಿನ ದಿನದಲ್ಲಿ ಹಿಂದೂ ಸಮಾಜಕ್ಕೆ ದ್ರೋಹ ಮಾಡುವ ಶಕ್ತಿಯೇ ಇರುವುದಿಲ್ಲ. ಭಾರತ ಯಾವ ರೀತಿ ಬದಲಾವಣೆ ಆಗುತ್ತಿದೆ ಎಂದರೆ, ಸುಮಾರು 400 ವರ್ಷದ ಹೋರಾಟದ ಫಲವಾಗಿ ರಾಮಮಂದಿರ ರಾಷ್ಟ್ರಮಂದಿರದ ಸ್ವರೂಪದಲ್ಲಿ ನಿರ್ಮಾಣವಾಗಿದೆ. ಇತ್ತೀಚೆಗೆ ರಾಮರಾಜ್ಯ ಸಂಕಲ್ಪವಿಟ್ಟುಕೊಂಡು 18 ಅಡಿ ಎತ್ತರದ ಭಗವಾನ್ ಧ್ವಜ ಹಾರಾಡುವಂತೆ ಮಾಡಲಾಗಿದೆ ಎಂದರೆ ಭಾರತ ನಿಶ್ಚಿತವಾಗಿ ಜಗತ್ಗುರುವಾಗುವುದರಲ್ಲಿ ಸಂಶಯವಿಲ್ಲವೆಂದು ಹೇಳಿದರು.
ಇದಕ್ಕೂ ಮುನ್ನ ಗಂಗನಮಕ್ಕಿ ಗಣಪತಿ ದೇವಸ್ಥಾನದಿಂದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನವರೆಗೆ
ಧರ್ಮ ಜ್ಯೋತಿ ಹಿಡಿದು ಮೆರವಣಿಗೆ ಸಾಗಿ ಮುನ್ನಡೆದ ದತ್ತ ಭಕ್ತರು ಸನಾತನ ಹಿಂದು ಧರ್ಮಕ್ಕೆ ಜೈ ಘೋಷ್ ಕೂಗುವ ಮೂಲಕ ಶೋಭಾಯಾತ್ರೆ ಮೆರವಣಿಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ತಿನ ತಾಲೂಕು ಅಧ್ಯಕ್ಷ ಸುದೇವ್ ಗುತ್ತಿ ವಹಿಸಿದ್ದರು. ಉಪಾಧ್ಯಕ್ಷರಾದ ಅಶ್ವತ್ ಬೆಟ್ಟಗೆರೆ, ಅಭಿಲಾಷ್ ಉಗ್ಗೇಹಳ್ಳಿ, ಕಾರ್ಯದರ್ಶಿ ಪ್ರಶಾಂತ್ ಹಂಡುಗುಳಿ, ಸಂಯೋಜಕ ಸಂತೋಷ್, ಸಹ ಸಂಯೋಜಕ ಕಾರ್ತಿಕ್, ಜಿಲ್ಲಾ ಉಪಾಧ್ಯಕ್ಷ ಮಹೇಶ್ ಸಾಲುಮರ, ಜಿಲ್ಲಾ ಗೋರಕ್ಷಾ ಪ್ರಮುಖ್ ಅಜಿತ್ ಜೇನುಬೈಲ್ ಉಪಸ್ಥಿತರಿದ್ದರು.
