ಎನ್. ಆರ್. ಪುರ : ಕಾಫಿನಾಡು ಭಾಗದಲ್ಲಿ ದಿನೇ ದಿನೇ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು .. ಎನ್. ಆರ್. ಪುರ ತಾಲ್ಲೂಕಿನ ಮಡಬೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಮಡಬೂರು ಗ್ರಾಮದ ನಿವಾಸಿ ವನಮಾಲಮ್ಮ ಅವರ ಅಡಿಕೆ ತೋಟಕ್ಕೆ ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ದಾಳಿ ಮಾಡಿ ಸರಿ ಸುಮಾರು 300ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಧರೆಗುರುಳಿಸಿ ನಾಶ ಮಾಡಿವೆ.
ನಾವು ಮರಗಳನ್ನ ಮಕ್ಕಳ ಹಾಗೆ ಪೋಷಿಸಿದ್ದೆವು. ವರ್ಷಗಳ ಕಾಲದಿಂದ ಅವುಗಳನ್ನು ಸಾಕಿದ್ದೆವು. ಈಗ ಕಣ್ಣೇದುರಲ್ಲೇ ಅಡಿಕೆ ಮರಗಳು ನೆಲಸಮವಾಗಿರುವುದನ್ನು ಕಂಡು ಕಣ್ಣೀರಲ್ಲೇ ಕೈತೊಳೆಯುವಂತ ಪರಿಸ್ಥಿತಿ ಒದಗಿದೆ ಎನ್ನುತ್ತಿದ್ದಾರೆ.
ಮಡಬೂರು ಗ್ರಾಮದ ವ್ಯಾಪ್ತಿಗೆ, ಆರಂಬಳ್ಳಿ ಮೀಸಲು ಅರಣ್ಯ ವ್ಯಾಪ್ತಿಗೆ ಭದ್ರಾ ವನ್ಯಜೀವಿ ವಿಭಾಗದಿಂದ ಭದ್ರಾ ಹಿನ್ನೀರು ದಾಟಿ ಮಂಗಳವಾರ ರಾತ್ರಿ ಐದಾರು ಆನೆಗಳು ಬಂದಿದ್ದವು. ನಿನ್ನೆ ಮರಿ ಆನೆಗಳು ಸೇರಿ ಒಟ್ಟು 16 ಕಾಡಾನೆಗಳು ಬಂದಿದ್ದು, ಅರಣ್ಯ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ತಂಡದ ಸಹಯೋಗದಲ್ಲಿ ಅವುಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ಮಾಡಲಾಗಿದೆ.
ಈ ಘಟನೆಯ ಬಗ್ಗೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಅವರು ಮಾಹಿತಿ ತಿಳಿದು ಸಂತ್ರಸ್ಥರಿಗೆ ಸೂಕ್ತ ಬೆಳೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ಅಲ್ಲದೇ ಕಾಡಾನೆಗಳು ನಾಡಿಗೆ ಬರದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅರಣ್ಯ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
