ಎನ್.ಆರ್.ಪುರ: ತಾಲೂಕಿನ ಚಿಬ್ಬಳ್ಳಿ ಗ್ರಾಮದ ಕೆ. ಕಣಬೂರು ವ್ಯಾಪ್ತಿಯಲ್ಲಿ ಹಾಡಹಗಲೇ ಕಳ್ಳತನವೊಂದು ನಡೆದಿದ್ದು, ಸುಮಾರು 16.35 ಲಕ್ಷ ರೂ.ಮೌಲ್ಯದ ಬಂಗಾರದ ಒಡವೆಗಳನ್ನು ಕಳ್ಳರು ದೋಚಿದ್ದಾರೆ.
ಪಟ್ಟಣದಲ್ಲಿ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಕೆ.ಎಸ್. ಶ್ರೀಧರ್. ಎಂಬುವವರು ಕೆಲಸದ ಮೇರೆಗೆ ಪಟ್ಟಣಕ್ಕೆ ತೆರಳಿದ್ದ ಸಮಯವನ್ನು ಹೊಂಚು ಹಾಕಿದ ಕಳ್ಳರು ಈ ಕೃತ್ಯವೆಸಗಿದ್ದಾರೆ.ಮಧ್ಯಾಹ್ನ ಮನೆಯ ಮಾಲೀಕರು ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಮುಂಭಾಗದ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿರುವುದು ಪತ್ತೆಯಾಗಿದೆ.

ಮನೆಯ ಒಳಗೆ ಹೋಗಿ ಪರಿಶೀಲಿಸಿದಾಗ, ಬೆಡೂಮ್ನಲ್ಲಿದ್ದ ಗಾಡೇಜ್ ಬೀರುವಿನ ಬಾಗಿಲು ತೆರೆದಿದ್ದು, ಅದರ ಮಧ್ಯದ ಕಬೋರ್ಡ್ನಲ್ಲಿ ಇಟ್ಟಿದ್ದ ಒಟ್ಟು 109 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳು ಕಳುವಾಗಿವೆ.
ಕಳ್ಳತನವಾದ ವಸ್ತುಗಳಲ್ಲಿ 16 ಗ್ರಾಂನ ಕಾಸಿನ ತಾಳಿ, 24 ಗ್ರಾಂನ ಮುತ್ತಿನ ಸರ, 16 ಗ್ರಾಂನ ನೆಕ್ಸೆಸ್, 12 ಗ್ರಾಂನ ಒಂದು ಬಳೆ ಹಾಗೂ ವಿವಿಧ ತೂಕದ ಸುಮಾರು 5-6 ಉಂಗುರಗಳು ಮತ್ತು ಕಿವಿ ಓಲೆಗಳು ಸೇರಿವೆ. ಮನೆಯ ಮಾಲೀಕರು ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಳ್ಳರ ಪತ್ತೆಗೆ ಬಲೆಬೀಸಿದ್ದಾರೆ.
