ಚಿಕ್ಕಮಗಳೂರು: ಎನ್ ಆರ್ ಪುರ ತಾಲೂಕಿನಲ್ಲಿ ಸುಮಾರು 38 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಅತ್ಯಂತ ಉದ್ದವಾದ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಲೋಕಾರ್ಪಣೆ ಮಾಡಿದರು. ವಿಶೇಷವೆಂದರೆ ಸೇತುವೆಗೆ ‘ಸಿದ್ದರಾಮಯ್ಯ ಸೇತುವೆ’ ಎಂದು ನಾಮಕರಣ ಮಾಡಲಾಯಿತು.

ಸೇತುವೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಿದರು. ಬಳಿಕ ದೇವರಿಗೆ ಪೂಜೆ ಸಲ್ಲಿಸಿ ಟೇಪ್ ಕತ್ತರಿಸುವ ಮೂಲಕ ಸೇತುವೆಯನ್ನು ಸಿಎಂ ಉದ್ಘಾಟಿಸಿದರು.

ಹಂದೂರು ಹಾಗೂ ಹೊನ್ನೆಕುಡಿಗೆ ಗ್ರಾಮದಿಂದ ನರಸಿಂಹರಾಜಪುರಕ್ಕೆ ಸಂಪರ್ಕಿಸುವ ಭದ್ರಾ ಹಿನ್ನೀರಿನಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಸೇತುವೆಯನ್ನು ಉದ್ಘಾಟನೆ ಮಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ರಾಜಕಾರಣಿಗಳ ಜೊತೆ ಸಂಚಾರ ಮಾಡಿ ಸೇತುವೆಯನ್ನು ವೀಕ್ಷಿಸಿದರು. ಅಲ್ಲದೆ ಭದ್ರ ಹಿನ್ನೀರಿನ ಸೌಂದರ್ಯವನ್ನು ನೋಡಿ ಸಂತೋಷ ಪಟ್ಟರು.
ಈ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಶೃಂಗೇರಿ ಶಾಸಕರಾದ ಟಿ.ಡಿ.ರಾಜೇಗೌಡ, ಕಡೂರು ಶಾಸಕರಾದ ಆನಂದ್, ತರೀಕೆರೆ ಶಾಸಕರಾದ ಶ್ರೀನಿವಾಸ್, ಮಾಗಡಿ ಶಾಸಕ ಬಾಲಕೃಷ್ಣ ಸೇರಿ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
