ಚಿಕ್ಕಮಗಳೂರು: ಸಾಲಬಾಧೆಯಿಂದ ಮನನೊಂದು ಕಳೆನಾಶಕ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನರಸಿಂಹರಾಜಪುರ ತಾಲೂಕು ಆಲ್ದಾರ್ ಗ್ರಾಮದಲ್ಲಿ ನಡೆದಿದೆ. ಮಾಕು (68) ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದವರು.
ಮಾಕು ಅವರು 3.20 ಗುಂಟೆ ಜಮೀನು ಹೊಂದಿದ್ದು, ಗ್ರಾಮೀಣ ಕೂಟದಲ್ಲಿ 1 ಲಕ್ಷ ರೂ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ 50ಸಾವಿರ, ಖಾಸಗಿ ಹಣಕಾಸು ಸಂಸ್ಥೆಯಲ್ಲಿ 70 ಸಾವಿರ, ಜತೆಗೆ 1.50ಲಕ್ಷ ಕೈಸಾಲ ಸೇರಿದಂತೆ 3.80ಲಕ್ಷ ರೂ. ಸಾಲ ಮಾಡಿ ಜಮೀನಿನಲ್ಲಿ ಶುಂಠಿ ಬೆಳೆಯನ್ನು ಬೆಳೆದಿದ್ದರು.
ಶುಂಠಿ ಬೆಳೆಗೆ ಚುಕ್ಕೆರೋಗ ಬಾಧೆ ಆವರಿಸಿದ್ದು ಶುಂಠಿ ಬೆಳೆ ಸಂಪೂರ್ಣ ನಾಶವಾಗಿದ್ದು, ಸಾಲ ತೀರಿಸುವುದು ಹೇಗೆಂದು ಯೋಚಿಸಿ ಖಿನ್ನತೆಗೆ ಒಳಗಾಗಿದ್ದರು. ಆ.13ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಕಳೆನಾಶಕ ಸೇವಿಸಿ ಅಸ್ವಸ್ಥರಾಗಿದ್ದರು.
ಮಾಕು ಅವರ ಪತ್ನಿ ಅವರು ಪತಿ ವಿಷ ಸೇವಿಸಿರುವುದು ತಿಳಿದು ಮಗನಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಅವರನ್ನು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
