ಕೊಟ್ಟಿಗೆಹಾರ : ಧರ್ಮಸ್ಥಳ–ಹೊರನಾಡು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಕಸದ ರಾಶಿಗಳು ಗುಡ್ಡಗಟ್ಟಿರುವ ದು:ಸ್ಥಿತಿ ಬೆಳಕಿಗೆ ಬಂದಿದೆ. ಬಿದ್ರಹಳ್ಳಿ ಕೆಎಸ್ಆರ್ಟಿಸಿ ಡಿಪೋ ಎದುರು ಹಾಗೂ ಮೂಡಿಗೆರೆಯ ಹ್ಯಾಂಡ್ಪೋಸ್ಟ್ ಸಮೀಪ ಕೃಷಿ ಸಂಶೋಧನಾ ಕೇಂದ್ರ ಮತ್ತು ಆರ್ಟಿಕಲ್ಚರ್ ಕಾಲೇಜು ಪ್ರದೇಶದಲ್ಲಿ ಅಕ್ರಮವಾಗಿ ಕಸ ಹಾಕಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಮಾರ್ಗವು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಸಂಚರಿಸುತ್ತಾರೆ. ಆದರೆ ರಸ್ತೆ ಪಕ್ಕದಲ್ಲೇ ಕಸದ ದುರ್ವಾಸನೆ ಹರಡುವುದರಿಂದ ಪ್ರಯಾಣಿಕರು ಮೂಗಿಗೆ ರುಮಾಲು ಹಿಡಿದು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರ ಹೇಳಿಕೆಯ ಪ್ರಕಾರ, ಕಸದ ಸಂಗ್ರಹಣೆ ವ್ಯವಸ್ಥೆ ಇದ್ದರೂ, ಕೆಲವರು ತಮ್ಮ ಮನೆಯ ಕಸವನ್ನು ಸರಿಯಾಗಿ ನೀಡದೇ ರಾತ್ರಿ ವೇಳೆ ರಸ್ತೆ ಪಕ್ಕಕ್ಕೆ ತಂದು ಬಿಸಾಡುತ್ತಿರುವುದು ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಮನೆ ಸ್ವಚ್ಛತೆಯನ್ನು ಹೇಗೆ ಕಾಪಾಡುತ್ತೇವೋ ಅದೇ ರೀತಿಯಲ್ಲಿ ನಮ್ಮ ಊರಿನ ಸ್ವಚ್ಛತೆಯನ್ನೂ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಸ್ಥಳೀಯರು ಅರಿತುಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ

ಗ್ರಾಮದ ಸ್ವಚ್ಛತೆ ಕಾಪಾಡುವುದು ಕೇವಲ ಆಡಳಿತದ ಹೊಣೆಗಾರಿಕೆ ಮಾತ್ರವಲ್ಲ, ಅದು ಸ್ಥಳೀಯರ ಸಹಭಾಗಿತ್ವದಿಂದಲೇ ಸಾಧ್ಯ. ಆದರೆ ಕೆಲವರ ನಿರ್ಲಕ್ಷ್ಯದಿಂದ ಗ್ರಾಮದೆಲ್ಲೆಡೆ ಕಸದ ರಾಶಿಗಳು ಕಾಣಿಸಿಕೊಳ್ಳುತ್ತಿದ್ದು, ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಮಳೆಗಾಲದಲ್ಲಿ ಈ ಕಸ ಇನ್ನಷ್ಟು ಹರಡಿ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುವ ಭೀತಿ ಇದೆ.
