ಮುಂಬೈ : ಭಾರತ ಉದ್ಯಮ ರಂಗದ ಧ್ರುವತಾರೆ, ದೇಶದ ಅಭಿವೃದ್ಧಿ ಬಗೆಗಿನ ಅದ್ಭುತ ಕನಸುಗಾರ ರತನ್ ಟಾಟಾ ತಮ್ಮ 86ನೇ ವಯಸ್ಸಿನಲ್ಲಿ ಬಾಳ ಯಾತ್ರೆಯನ್ನು ಮುಗಿಸಿದ್ದಾರೆ. ಟಾಟಾ ಅವರ ಜೀವನದ ಹಲವು ಪ್ರಮುಖ ಅಂಶಗಳು ಸದಾ ಕುತೂಹಲಕಾರಿ ಎಂಬುದು ಕೂಡಾ ನಾವು ಗಮನಿಸಬೇಕಾದ ವಿಚಾರ.
ಕೋಟ್ಯಧಿಪತಿಯಾಗಿದ್ದ ರತನ್ ಟಾಟಾ ತಮ್ಮ ಕೊನೆಯ ದಿನದವರೆಗೂ ಒಬ್ಬಂಟಿಯಾಗಿಯೇ ಕಳೆದರು. ಅವಿವಾಹಿತರಾಗಿಯೇ ಉಳಿದ ಅವರು ತಮ್ಮ ವಿಶಾಲವಾದ ಟಾಟಾ ಸಮೂಹವನ್ನೇ ಸಂಸಾರದಂತೆ ಕಂಡವರು. ಇವರು ಯಾಕೆ ವಿವಾಹವಾಗಲಿಲ್ಲ ಎಂಬುದಕ್ಕೆ ಹಿಂದೆ ಸಂದರ್ಶನವೊಂದರಲ್ಲಿ ಕುತೂಹಲಕಾರಿ ಅಂಶವೊಂದನ್ನು ಹಂಚಿಕೊಂಡಿದ್ದರು.
1960 ರ ಸುಮಾರಿನಲ್ಲಿ ತಮ್ಮ ವ್ಯಾಸಂಗ ನಿಮಿತ್ತ ಅಮೆರಿಕಾದಲ್ಲಿದ್ದರು. ಈ ವೇಳೆ ಅಲ್ಲಿ ಅವರಿಗೆ ಯುವತಿಯೊಬ್ಬರೊಂದಿಗೆ ಪ್ರೇಮಾಂಕುರವಾಗಿತ್ತು. ಆ ಪ್ರೀತಿ ಬಹಳ ಗಾಢವಾಗಿಯೂ ಸಾಗಿತ್ತು. ಎಷ್ಟರ ಮಟ್ಟಿಗೆ ಎಂದರೆ ಇನ್ನೇನು ಇವರಿಬ್ಬರು ಮದುವೆಯಾಗುತ್ತಾರೆ ಎಂದೇ ಭಾವಿಸಲಾಗಿತ್ತು. ಮಾನಸಿಕವಾಗಿಯೂ ಅವರಿಬ್ಬರು ಮದುವೆ ಮಾಡಿಕೊಳ್ಳಲು ಸಿದ್ಧರಾಗಿದ್ದರು ಕೂಡಾ. ಆದರೆ ಈ ನಡುವೆ ರತನ್ ಟಾಟಾ ಅವರ ಅಜ್ಜಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಹೀಗಾಗಿ ಭಾರತಕ್ಕೆ ಮರಳಬೇಕಾದ ಪ್ರಮೇಯ ಬರುತ್ತದೆ. ಅವರು ಭಾರತಕ್ಕೆ ಮರಳುತ್ತಾರೆ ಕೂಡಾ. ಶೀಘ್ರದಲ್ಲಿಯೇ ತಾನು ಪ್ರೀತಿಸುತ್ತಿದ್ದ ಗೆಳತಿಯನ್ನೂ ಭಾರತಕ್ಕೆ ಬರುವಂತೆ ಹೇಳಿರುತ್ತಾರೆ.
ವಿಪರ್ಯಾಸದ ಸಂಗತಿಯೆಂದರೆ ಭಾರತ ಮತ್ತು ಚೀನಾ ನಡುವೆ 1962 ರಲ್ಲಿ ಯುದ್ಧ ಶುರುವಾಗುತ್ತದೆ. ಈ ಯುದ್ಧ ರತನ್ ಟಾಟಾ ಅವರ ಮದುವೆಯ ಕನಸ್ಸನ್ನು ಕೂಡಾ ಕೊನೆಗಾನಿಸಿಬಿಡುತ್ತೆ. ಯುದ್ಧ ಯಾವಾಗ ಶುರುವಾಯಿತೋ, ಆ ನಂತರದಲ್ಲಿ ಆ ಯುವತಿಯ ಕುಟುಂಬ ಭಾರತಕ್ಕೆ ಬರಲು ಒಪ್ಪುವುದಿಲ್ಲ. ಅಲ್ಲಿಗೆ ಅವರ ಪ್ರೀತಿಯೂ ಕೊನೆಯಾಗುತ್ತೆ. ಆದ್ರೆ ನನ್ನ ಜೀವನದಲ್ಲಿ ಆ ಯುವತಿ ಜತೆಗೆ ಕಳೆದ ಎರಡು ವರ್ಷ ಬಹಳ ವಿಶೇಷ ಅಂತ ಟಾಟಾ ಅವರೇ ಹೇಳಿಕೊಂಡಿದ್ದಾರೆ.
ನಂತರದಲ್ಲಿ ಉದ್ಯಮ ಕ್ಷೇತ್ರ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ರತನ್ ಟಾಟಾ ನಂತರದಲ್ಲಿ ತಮ್ಮ ಹಿರಿಯರು ಹುಟ್ಟು ಹಾಕಿದ್ದ ಟಾಟಾ ಸಮೂಹ ಸಂಸ್ಥೆಗೆ ಹೊಸ ವೇಗ ನೀಡಿದ್ದು, ವಿವಿಧ ಕ್ಷೇತ್ರದಲ್ಲಿ ವಿಸ್ತರಿಸುವಂತೆ ಮಾಡಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿಗೊಳ್ಳುವಂತೆ ಮಾಡಿದ್ದೆಲ್ಲ ಈಗ ಇತಿಹಾಸ.
ಮದುವೆಯಾಗದೆ ಒಬ್ಬಂಟಿಯಾಗಿಯೇ ಇದ್ದ ರತನ್ ಟಾಟಾ… – ವಿವಾಹದ ಕನಸನ್ನು ಭಗ್ನ ಮಾಡಿದ್ದು ಆ ಒಂದು ಯುದ್ಧ..!
RELATED ARTICLES