ಕೊಪ್ಪಳ : ಜಿಲ್ಲೆಯ ಗಂಗಾವತಿಯಲ್ಲಿ ಅಳವಡಿಸಲಾಗಿರುವ ಬೀದಿ ದೀಪದ ಕಂಬಗಳು ಈಗ ವಿವಾದದ ಸ್ವರೂಪ ಪಡೆದುಕೊಂಡಿವೆ. ವಿವಾದಕ್ಕೀಡಾಗಿರುವ ಕಂಬಗಳನ್ನು ತೆರವು ಮಾಡಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಂಗಾವತಿ ತಹಸೀಲ್ದಾರ್ ಪೊಲೀಸರಿಗೆ ಸೂಚಿಸಿದ್ದಾರೆ.
ಜುಲೈ ಸರ್ಕಲ್ನಿಂದ ರಾಣಾ ಪ್ರತಾಪ ಸಿಂಹ ಸರ್ಕಲ್ವರೆಗೆ ರಸ್ತೆ ಮಧ್ಯದಲ್ಲಿ ಇತ್ತೀಚೆಗೆ ಸ್ಟ್ರೀಟ್ ಲೈಟ್ ಅಳವಡಿಸಲಾಗಿತ್ತು. ಕೆಐಆರ್ಡಿಎಲ್ ಅಳವಡಿಕೆ ಮಾಡಿದ್ದ ಆ ಕಂಬಗಳಲ್ಲಿ ಬಿಲ್ಲು ಬಾಣ, ಗಧೆ, ತಿಮ್ಮಪ್ಪನ ನಾಮದ ಚಿತ್ರವಿದ್ದು, ಇದು ಜನರ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮುಖಂಡರು ಆರೋಪಿಸಿದ್ದರು. ಅವುಗಳನ್ನು ತೆರವು ಮಾಡುವಂತೆ ನಗರಭೆ ಆಯುಕ್ತರಿಗೆ ದೂರು ನೀಡಿದ್ದರು.
ಇದೀಗ ನಗರ ಪೊಲೀಸ್ ಠಾಣೆಗೆ ಗಂಗಾವತಿ ತಹಸೀಲ್ದಾರ್ ಪತ್ರ ಬರೆದಿದ್ದು, ಆ ಕಂಬಗಳನ್ನು ತೆರವು ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಇದು ಈಗ ಜಿಲ್ಲೆಯಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
ಇದರಿಂದ ಯಾವುದೇ ಸಮಸ್ಯೆ ಇಲ್ಲ. ಹನುಮನ ಜನ್ಮಸ್ಥಳ ಇರೋದು ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ. ಧಾರ್ಮಿಕ ಸ್ಥಳಗಳಲ್ಲಿ ಈ ರೀತಿಯ ಚಿತ್ರಗಳು ಸಾಮಾನ್ಯ. ಇದನ್ನು ಯಾವುದೇ ಕಾರಣಕ್ಕೂ ತೆರವು ಮಾಡಬಾರದು ಎಂದು ಹಿಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.





