ಬೆಂಗಳೂರು : ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ನೀಡಿರುವ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ತುರ್ತು ಸಂಪುಟ ಹಾಗೂ ಶಾಸಕಾಂಗ ಸಭೆ ಕರೆಯಲಾಗಿದೆ.
ರಾಜ್ಯಪಾಲರ ಆದೇಶ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಬೆನ್ನಲ್ಲೇ ಸಚಿವ ಸಂಪುಟ ಸಭೆ ಹಾಗೂ ಶಾಸಕಾಂಗ ಸಭೆ ಕರೆಯುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸಿಂಗ್ ಸುರ್ಜೇವಾಲ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಅದರಂತೆ ಗುರುವಾರ ಸಭೆ ಕರೆಯಲಾಗಿದೆ.

ಈ ಹಿಂದೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಸಂದರ್ಭವೂ ಸಚಿವ ಸಂಪುಟ ಸಭೆ ನಡೆದು, ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದೀಗ ಹೈಕೋರ್ಟ್ ತೀರ್ಪು ನಂತರ ನಡೆಯಲಿರುವ ಸಭೆಯಲ್ಲೂ ಸಿಎಂ ಬೆಂಬಲಿಸಿ ನೈತಿಕ ಸ್ಥೈರ್ಯ ತುಂಬುವ ಸಾಧ್ಯತೆ ಇದೆ.
ಇದರೊಂದಿಗೆ ಶಾಸಕಾಂಗ ಸಭೆಗೂ ಮಹತ್ವ ಬರಲಿದ್ದು, ಶಾಸಕರು ಯಾವ ರೀತಿಯ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸುತ್ತಾರೆಂಬ ಕುತೂಹಲ ಮೂಡಿದೆ.



