ಚಿಕ್ಕಮಗಳೂರು/ಬಾಸಾಪುರ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ‘ಬದುಕು’ ಕಳೆದುಕೊಂಡವರ ಪರಿಸ್ಥಿತಿ ಇಂದಿಗೂ ಮೂರಾಬಟ್ಟೆಯಾಗಿದೆ. ಈ ಹಿನ್ನೆಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಪುನವರ್ಸತಿ ಹೋರಾಟ ಸಮಿತಿ ಸದಸ್ಯರು ಇಂದು ಶಾಸಕ ಟಿ.ಡಿ ರಾಜೇಗೌಡರನ್ನ ಗೃಹ ಕಚೇರಿ ಬಾಸಪುರದಲ್ಲಿ ಭೇಟಿ ಮಾಡಿ, ಆಗಿರುವ ಲೋಪದೋಷಗಳನ್ನ ಸರಿಪಡಿಸುವಂತೆ ಮನವಿ ಮಾಡಿದರು.

ಸದಸ್ಯರ ಮನವಿಗೆ ಸಕಾರತ್ಮಾಕವಾಗಿ ಸ್ಪಂದಿಸಿದ ಶಾಸಕರು, ಶೀಘ್ರದಲ್ಲೇ ಜಿಲ್ಲಾಧಿಕಾರಿ, ಸಂಸದರು, ಶಾಸಕರು ಹಾಗೂ ಅಧಿಕಾರಿಗಳು, ಸಂತ್ರಸ್ಥರನ್ನ ಒಳಗೊಂಡ ಜಿಲ್ಲಾ ಮಟ್ಟದ ಸಭೆಯನ್ನ ನಡೆಸಿ, ಚರ್ಚೆ ಮಾಡಿ ಎಲ್ಲರ ಅಭಿಪ್ರಾಯ ಪಡೆಯುದಾಗಿ ತಿಳಿಸಿದರು. ಸಭೆ ಬಳಿಕ ಮುಖ್ಯಮಂತ್ರಿ, ಕಂದಾಯ ಹಾಗೂ ಅರಣ್ಯ ಮಂತ್ರಿಗಳ ಬಳಿ ತಮ್ಮ ನೇತೃತ್ವದಲ್ಲಿ ಒಂದು ನಿಯೋಗ ಕರೆದುಕೊಂಡು ಹೋಗುವುದಾಗಿ ಸಮಿತಿಯ ಸದಸ್ಯರಿಗೆ ಭರವಸೆ ನೀಡಿದರು.
ಈಗಾಗಲೇ ಅನೇಕ ವರ್ಷಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಜಾಗವನ್ನ ಕಳೆದುಕೊಂಡಿರುವ ಸಂತ್ರಸ್ಥರು, ಇಂದಿಗೂ ಕಡುಕಷ್ಟದಲ್ಲೇ ಜೀವನ ನಡೆಸುತ್ತಾ ಬಂದಿದ್ದಾರೆ. ಪುನವರ್ಸತಿ ಕಲ್ಪಿಸುವುದಾಗಿ ಹಿಂದಿನಿಂದಲೂ ಹೇಳುತ್ತಾ ಬಂದಿದ್ರೂ, ಇಲ್ಲಿಯವರೆಗೂ ಸಂತ್ರಸ್ಥರಿಗೆ ಬದುಕು ಕಟ್ಟಿಕೊಡುವ ಕೆಲಸ ಆಗಿಲ್ಲ. ಸದ್ಯ ಶಾಸಕರ ಮಾತಿನಿಂದ ಸಮಾಧಾನ ಆಗಿರುವ ಸಂತ್ರಸ್ಥರು, ಮುಂದಿನ ದಿನಗಳಲ್ಲಿ ನ್ಯಾಯ ಸಿಗುವುದಾಗಿ ಭಾವಿಸಿದ್ದಾರೆ.
ಇನ್ನೂ ಶಾಸಕರ ಭೇಟಿ ವೇಳೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನವರ್ಸತಿ ಹೋರಾಟ ಸಮಿತಿಯ ಅಧ್ಯಕ್ಷ ಸುನೀಲ್ ಮಾತೊಳ್ಳಿ, ಉಪಾಧ್ಯಕ್ಷ ಪ್ರದೀಪ್ ಕೂಳೆಗದ್ದೆ, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಪಿಸಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿನೇಶ್ ಹೆಗ್ಡೆ ಸೇರಿದಂತೆ ಸಂತ್ರಸ್ಥರು ಇದ್ದರು.
ವರದಿ: ಶಶಿ ಬೆತ್ತದಕೊಳಲು
