ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯ ಶಾರದಾ ದೇವಸ್ಥಾನಕ್ಕೆ ಭಕ್ತರ ಸೋಗಿನಲ್ಲಿ ಬಂದವ, ತಡರಾತ್ರಿ ಗಾಂಧಿ ಮೈದಾನದಲ್ಲಿರುವ ಅಂಗಡಿಗೆ ನುಗ್ಗಿ ₹80,000 ನಗದು ಕಳ್ಳತನ ಮಾಡಿದ್ದಾನೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಲೆನಾಡು ಉತ್ಪನ್ನಗಳ ಮಳಿಗೆಗೆ ರಾತ್ರಿ ಚಡ್ಡಿ, ಬನಿಯನ್ ಧರಿಸಿ ಬಂದ ಕಳ್ಳ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ್ದಾನೆ. ಕೃತ್ಯದ ಸುಳಿವು ಸಿಗದಿರಲೆಂದು ಅಂಗಡಿಗೆ ಬರುವ ಮುನ್ನ ಮೈದಾನದಲ್ಲಿ ತಳ್ಳೋ ಗಾಡಿಗಳ ಮೇಲೆ ಮುಚ್ಚಿರುವ ಬಟ್ಟೆಯನ್ನು ತಲೆ ಹಾಗೂ ದೇಹಕ್ಕೆ ಸುತ್ತಿಕೊಂಡಿದ್ದಾನೆ. ಅಂಗಡಿ ಮಾಲೀಕರು ಅಂಗಡಿಯೊಳಗೆ ಇರುವಾಗಲೇ ಕಳ್ಳತನ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಗಾಂಧಿ ಮೈದಾನದಲ್ಲಿ ಹತ್ತಾರು ಅಂಗಡಿಗಳಿದ್ದು, ಇಲ್ಲಿರುವ ಬಹುತೇಕ ಅಂಗಡಿಗಳಿಗೆ ಬಾಗಿಲುಗಳಿಲ್ಲ. ಟಾರ್ಪಲ್ ರೀತಿಯಲ್ಲಿ ಮುಚ್ಚಿ ರಾತ್ರಿ ವೇಳೆ ಅಂಗಡಿಗಳನ್ನು ಬಂದ್ ಮಾಡಲಾಗುತ್ತದೆ. ಇದನ್ನು ತಿಳಿದುಕೊಂಡಿರುವ ಕಳ್ಳ ರಾತ್ರಿ ಅಂಗಡಿಗೆ ನುಗ್ಗಿ ಕ್ಯಾಶ್ ಕೌಂಟರ್ನಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾನೆ.
