ಚಿಕ್ಕಮಗಳೂರು: 5 ವರ್ಷದ ಬಾಲಕಿಯ ಮೇಲೆ ಚಿರತೆಯೊಂದು ದಾಳಿ ನಡೆಸಿ, ಕಾಡಿಗೆ ಎಳೆದೊಯ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮುಂಡ್ರೆ ಸಮೀಪದ ನವಿಲೇಕಲ್ ಗುಡ್ಡ ಗ್ರಾಮದಲ್ಲಿ ನಡೆದಿದೆ.
ಮನೆಗೆ ಹಿಂದೆ ನಿಂತಿದ್ದ ಮಗುವನ್ನು ತಂದೆಯ ಮುಂದೆಯೇ ಚಿರತೆ ಹೊತ್ತುಕೊಂಡು ಹೋಗಿದೆ. ಕೂಲಿ ಕಾರ್ಮಿಕ ಬಸವರಾಜ್ ಎಂಬುವರ ಪುತ್ರಿ 5 ವರ್ಷದ ಸಾನ್ವಿ ಮೃತಪಟ್ಟಿದ್ದಾಳೆ.
ಕುತ್ತಿಗೆಗೆ ಬಾಯಿ ಹಾಕಿ ಚಿರತೆ ಮಗುವನ್ನು ಕೊಂದಿದೆ. ಕೂಗಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕುಮ್ಮತ್ತಗಿರಿ ನಿವಾಸಿಯಾಗಿರುವ ಬಸವರಾಜ್ ಕುಟುಂಬದವರು ಕೂಲಿ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದರು.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಚಿರತೆ ದಾಳಿ ಮಾಡಿತ್ತು. ಚಿರತೆ ಸೆರೆಗಾಗಿ ನೂರಾರು ಬಾರಿ ಸ್ಥಳೀಯರು ಮನವಿ ಮಾಡಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದೆ. ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
