ಚಿಕ್ಕಮಗಳೂರು: ಮನೆಯೊಂದರ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಕೋಟೆ ಕ್ಯಾಂಪ್ ನಲ್ಲಿ ನಡೆದಿದೆ.
ದೂರುದಾರರಾದ ಆಸ್ಮಾ ಪರ್ವೀನ್ ಅವರು ಕೆಲಸದ ನಿಮಿತ್ತ ಜ. 25 ರಂದು ಬೆಂಗಳೂರಿಗೆ ತೆರಳಿದ್ದರು. ಫೆ. 01 ರಂದು ಮನೆಗೆ ವಾಪಸ್ ಬಂದು ನೋಡಿದಾಗ, ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಯಾವುದೋ ಆಯುಧದಿಂದ ಬಾಗಿಲ ಬೀಗವನ್ನು ಮೀಟಿ ಒಳಗೆ ನುಗ್ಗಿದ್ದಾರೆ. ಮನೆಯ ಗಾಡೇಜ್ ನಲ್ಲಿದ್ದ ಲಾಕರ್ ಮುರಿದು ಅದರಲ್ಲಿದ್ದ ಸುಮಾರು 96,000 ರೂಪಾಯಿ ಬೆಲೆಬಾಳುವ 16 ಗ್ರಾಂ ಚಿನ್ನದ ಆಭರಣಗಳು ಹಾಗೂ 7,000 ರೂಪಾಯಿ ಮೌಲ್ಯದ 140 ಗ್ರಾಂ ಬೆಳ್ಳಿಯ ವಸ್ತುಗಳನ್ನು ದೋಚಿದ್ದಾರೆ.
ಕಳುವಾದ ಒಟ್ಟು ಆಭರಣಗಳ ಅಂದಾಜು ಮೌಲ್ಯ 1,03,000/- ರೂಪಾಯಿಗಳಾಗಿದ್ದು, ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
