ತರೀಕೆರೆ: ಶಾಲಾ ವಾಹನಕ್ಕೆ ಮುಂದೆ ಸಾಗಲು ಸ್ಥಳಾವಕಾಶ ಮಾಡಿಕೊಡಲು ಹೋಗಿ ಟಿಪ್ಪರ್ ಪಲ್ಟಿಯಾಗಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಜಮ್ಮಾಪುರ ಗ್ರಾಮದ ರಸ್ತೆ ತಿರುವಿನಲ್ಲಿ ನಡೆದಿದೆ.
ಜಮ್ಮಾಪುರ ಗ್ರಾಮದ ರಸ್ತೆ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಶಾಲಾ ವಾಹನ ಸಾಗಲು ಸ್ಥಳಾವಕಾಶ ಮಾಡಿಕೊಡಲು ಟಿಪ್ಪರ್ ಚಾಲಕ ವಾಹನವನ್ನು ರಸ್ತೆ ಬದಿಗೆ ತೆಗೆದುಕೊಂಡಾಗ ಟಿಪ್ಪರ್ ಲಾರಿ ಮಗುಚಿ ಬಿದ್ದಿದೆ. ಶಾಲಾ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯಬೇಕಾಗಿದ್ದ ಟಿಪ್ಪರ್ ಲಾರಿಯನ್ನು ಟಿಪ್ಪರ್ ಚಾಲಕ ಸಮಯ ಪ್ರಜ್ಞೆಯಿಂದ ರಸ್ತೆ ಬದಿಗೆ ವಾಹನ ತೆಗೆದುಕೊಂಡು ಹೋಗಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಯಿತು.
ಅದೃಷ್ಟವಶಾತ್ ಟಿಪ್ಪರ್ ಚಾಲಕ ಅಪಾಯದಿಂದ ಪಾರಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೊಡ್ಡ ದುರಂತ ತಪ್ಪಿದ್ದರಿಂದ ಎಲ್ಲರು ನಿಟ್ಟುಸಿರು ಬಿಟ್ಟಿದ್ದಾರೆ.
