ಸಕಲೇಶಪುರ: ಪಿತೃಪಕ್ಷ ಹಬ್ಬದ ನಿಮಿತ್ತ ಅಕ್ಕನ ಮನೆಗೆ ಊಟಕ್ಕೆ ಬಂದ ತಮ್ಮನೇ ಅಕ್ಕನ ಚಿನ್ನದ ಸರ ಕದ್ದ ಘಟನೆ ಸಕಲೇಶಪುರದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಕೇವಲ ಮೂರು ಗಂಟೆಗಳಲ್ಲೇ ಬಗೆಹರಿಸಿ ಚಿನ್ನವನ್ನು ವಶಪಡಿಸಿಕೊಂಡಿರುವ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ರವರ ನೇತೃತ್ವದ ತಂಡ ಶ್ಲಾಘನೆಗೆ ಪಾತ್ರವಾಗಿದೆ.
ನಗರದ ಚಂಪಕನಗರ ಬಡಾವಣೆಯ ಮಾನಸ ರವರು ಸೆ.15 ರಂದು ತಮ್ಮ ಜೀವನ್ ಹೆತ್ತೂರ್ರನ್ನು ಊಟಕ್ಕೆ ಕರೆಸಿಕೊಂಡಿದ್ದರು. ಆದರೆ ಊಟದ ವೇಳೆ ವ್ಯಾನಿಟಿ ಬ್ಯಾಗ್ನಲ್ಲಿ ಇಟ್ಟಿದ್ದ 16 ಗ್ರಾಂ ತೂಕದ, ಸುಮಾರು 1.50 ಲಕ್ಷ ರೂ. ಬೆಲೆಬಾಳುವ ಚಿನ್ನದ ಸರವನ್ನು ಜೀವನ್ ತನ್ನ ಸ್ನೇಹಿತ ಪ್ರಶಾಂತ್ ಹೆತ್ತೂರ್ ಸಹಕಾರದೊಂದಿಗೆ ಕದ್ದಿರುವುದು ಬೆಳಕಿಗೆ ಬಂದಿದೆ. ಕದ್ದ ಚಿನ್ನವನ್ನು ಅವರು ಬೆಂಗಳೂರಿನ ಶಿವು ಎಂಬಾತನಿಗೆ ಮಾರಾಟ ಮಾಡಿದ್ದರು.
ಚಿನ್ನ ಕಾಣದೆ ಸಂಶಯಗೊಂಡ ಮಾನಸ ರವರು ತಕ್ಷಣವೇ ಸಕಲೇಶಪುರ ನಗರ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಅವರಿಗೆ ದೂರು ನೀಡಿದರು. ದೂರು ಸ್ವೀಕರಿಸಿದ ಇನ್ಸ್ಪೆಕ್ಟರ್ ಮಹೇಶ್ರವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡರು.
ತಕ್ಷಣವೇ ಜೀವನ್ ಹಾಗೂ ಪ್ರಶಾಂತ್ರನ್ನು ವಿಚಾರಣೆ ನಡೆಸಿ ನಿಜವನ್ನು ಬಯಲು ಮಾಡಿಸಿದರು. ಅಲ್ಲದೆ, ಬೆಂಗಳೂರಿನ ಶಿವು ಅವರನ್ನು ಕರೆಸಿ ಕೇವಲ ಮೂರು ಗಂಟೆಗಳಲ್ಲೇ ಚಿನ್ನದ ಸರವನ್ನು ಠಾಣೆಗೆ ತಂದು ಮಾನಸ ರವರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾದರು.
ಮಾನಸ ರವರ ಕುಟುಂಬದವರು ಪೊಲೀಸರ ಈ ಶೀಘ್ರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. “ಜನರ ವಿಶ್ವಾಸವೇ ನಮ್ಮ ಬಲ, ಅದಕ್ಕೆ ತಕ್ಕಂತೆ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಇನ್ಸ್ಪೆಕ್ಟರ್ ಮಹೇಶ್ರವರು ಪ್ರತಿಕ್ರಿಯಿಸಿದ್ದಾರೆ.
