ಮೂಡಿಗೆರೆ : ಸ್ಮಶಾನದ ದಾರಿ ಸಮಸ್ಯೆ ಬಗೆಹರಿಸಲು ಗೌರಿಕೆರೆ ಗ್ರಾಮಸ್ಥರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ BSP ತಾಲೂಕು ಅಧ್ಯಕ್ಷ ರಮೇಶ್ ಲೋಕುವಳ್ಳಿ ಸ್ಮಶಾನದ ಚಿತಾಗಾರದ ರಸ್ತೆಯಲ್ಲಿ ಮುಳ್ಳಿನ ಗಿಡಗಳು ಬೆಳೆದಿವೆ. ಗ್ರಾಮದ ಕೊರವಲಯದಲ್ಲಿರುವ ಸ್ಮಶಾನಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮುಳ್ಳಿನ ಗಿಡಗಳ ನಡುವಿನ ಕಾಲು ಹಾದಿಯಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ. ಮಳೆ ಬಂದಾಗ ಈ ಪ್ರದೇಶ ಕೆಸರು ಗದ್ದೆಯಂತಾಗುತ್ತದೆ. ಅದರಲ್ಲೇ ಸರ್ಕಸ್ ಮಾಡುತ್ತಾ ಓಡಾಡಬೇಕಿದೆ.
ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಅನೇಕ ಸಮುದಾಯದವರು ಈ ಸ್ಮಶಾನ ಅವಲಂಬಿಸಿದ್ದಾರೆ. ಗ್ರಾಮ ಪಂಚಾಯಿತಿಯವರು ಕನಿಷ್ಠ ಸ್ವಚ್ಛತೆಯ ಕಡೆಗೂ ಗಮನಹರಿಸಿಲ್ಲದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು. ಒಂದು ವೇಳೆ, ರಾತ್ರಿ ಸಮಯದಲ್ಲಿ ಅಂತ್ಯಕ್ರಿಯೆ ನಡೆಸಬೇಕಾದರೆ ಬೆಳಕಿನ ವ್ಯವಸ್ಥೆಯೂ ಇಲ್ಲಿಲ್ಲ. ಶವ ಹೊತ್ತವರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಿ ಬರಬೇಕಾಗಿದೆ. ಇಲ್ಲಿನ ಅವ್ಯವಸ್ಥೆ, ಮೃತರಾದವರಿಗೆ ಗೌರವದ ವಿದಾಯ ಹೇಳುವ ಕಾರ್ಯಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಸ್ಮಶಾನದಲ್ಲಿ ನೀರು ಹಾಗೂ ವಿದ್ಯುತ್ ದೀಪದ ವ್ಯವವ್ಥೆ ಕಲ್ಪಿಸಬೇಕು. ಕಾಂಪೌಂಡ್ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು’ ಎನ್ನುವುದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
