ಕೊಪ್ಪ: ಕಾಡಾನೆ-ಮಾನವ ಸಂಘರ್ಷ ತಡೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ವಿಭಾಗದಲ್ಲಿ ಶೃಂಗೇರಿ-ಕೊಪ್ಪ ಆನೆ ಕಾರ್ಯಪಡೆ ಕಾರ್ಯಗತಗೊಳಿಸಲು ಸರ್ಕಾರ ಆದೇಶ ಜಾರಿ ಮಾಡಿದೆ.

ಈ ಮೂಲಕ ಹಲವು ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸದಂತೆ ಆಗಿರೋದು ಸಂತಸದ ವಿಚಾರ. ಇತ್ತೀಚಿಗೆ ಈ ಭಾಗದಲ್ಲಿ ಕಾಡಾನೆ ಉಪಟಳ ಮೀತಿ ಮೀರಿದ್ದು, ಕಾಡಾನೆ ದಾಳಿಯಿಂದ ಸಾಲು ಸಾಲು ಪ್ರಾಣಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನಾಕ್ರೋಶ ವ್ಯಕ್ತವಾಗಿತ್ತು. ಜನರ ಮನವಿಗೆ ಸ್ಪಂದಿಸಿದ ಶಾಸಕ ಟಿ.ಡಿ ರಾಜೇಗೌಡರು, ಸರ್ಕಾರದ ಗಮನವನ್ನ ಸೆಳೆಯುವಲ್ಲಿ ಸಫಲರಾಗಿದ್ದು, ಕೂಡಲೇ ಕೊಪ್ಪ ವಿಭಾಗದಲ್ಲಿ ಆನೆ ಕಾರ್ಯಪಡೆ ಕಾರ್ಯಗತಗೊಳಿಸುವಂತೆ ಸರ್ಕಾರ ಆದೇಶ ಮಾಡಿದೆ.
ಆನೆ ಕಾರ್ಯಪಡೆ ಅನುಷ್ಠಾನಗೊಳ್ಳುವುದರಿಂದ ಹೆಚ್ಚಿನ ಅರಣ್ಯ ಸಿಬ್ಬಂದಿ, ಹೆಚ್ಚಿನ ಸಲಕರಣೆಗಳು, ಹೆಚ್ಚಿನ ಸಂಪನ್ಮೂಲ ಲಭ್ಯವಾಗಲಿದ್ದು, ಕಾಡಾನೆ-ಮಾನವ ಸಂಘರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ಆನೆ ಕಾರ್ಯಪಡೆಯನ್ನ ಕಾರ್ಯಗತಗೊಳಿಸಬೇಕು ಎಂಬುದು ಆ ಭಾಗದ ಜನರ ಪ್ರಮುಖ ಬೇಡಿಕೆಯಾಗಿತ್ತು.
ಇದೀಗ ಕೊಪ್ಪ ವಿಭಾಗದಲ್ಲಿ ಆನೆ ಕಾರ್ಯಪಡೆ ರಚನೆ ಆಗ್ತಾ ಇರೋದು ಜನಸಾಮಾನ್ಯರಲ್ಲಿ ಸಂತಸ ತಂದಿದೆ. ಇದೇ ವೇಳೆಯಲ್ಲಿ ಕಾರ್ಯಪಡೆ ರಚನೆಗೆ ಬಿಟ್ಟುಬಿಡದೇ ಪ್ರಯತ್ನಿಸಿದ ಶಾಸಕ ಟಿ.ಡಿ ರಾಜೇಗೌಡರ ಪ್ರಯತ್ನವನ್ನ ರೈತರು ಶ್ಲಾಘಿಸಿದ್ದಾರೆ ಜೊತೆಗೆ ಸಹಕಾರ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಧನ್ಯವಾದ ತಿಳಿಸಿದ್ದಾರೆ
ಕೊಪ್ಪ ವಿಭಾಗದ ಚಿಕ್ಕ ಅಗ್ರಹಾರ ವಲಯ ವ್ಯಾಪ್ತಿಯ ಸಾರ್ಯಾದಿಂದ ಕರ್ಕೂಟ ಪ್ರದೇಶದ 2.81 ಕಿಲೋ ವ್ಯಾಪ್ತಿಯಲ್ಲಿ ರೇಲ್ವೇ ಬ್ಯಾರಿಕೇಡ್ ನಿರ್ಮಾಣಕ್ಕೆ ಅಂದಾಜು 4 ಕೋಟಿ, 69 ಲಕ್ಷದ 40 ಸಾವಿರ, ಬೆಳ್ಳಂಗಿಯಿಂದ ಕೊಳೆಹಳ್ಳ ಪ್ರದೇಶದ 2.23 ಕಿಲೋಮೀಟರ್ ವ್ಯಾಪ್ತಿಗೆ 3 ಕೋಟಿ 76 ಲಕ್ಷದ 40 ಸಾವಿರ ಹಾಗೂ ಕೊಳ್ಳೇಹಳ್ಳದಿಂದ ಕರ್ಕೂಟ ಪ್ರದೇಶದ ಕಿಲೋಮೀಟರ್ ವ್ಯಾಪ್ತಿಗೆ ರೇಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 4 ಕೋಟಿ 31 ಲಕ್ಷದ 70 ಸಾವಿರ ಅನುದಾನ ಹೊರಡಿಸಿ ಸರ್ಕಾರ ಆದೇಶ ಮಾಡಿದೆ. ಈ ಮೂಲಕ ಒಟ್ಟು 7.61 ಕಿಲೋ ವ್ಯಾಪ್ತಿ ರೇಲ್ವೆ ಬ್ಯಾರಿಕೇಡ್ ನಿರ್ಮಿಸಲು 12 ಕೋಟಿ 78 ಲಕ್ಷ ಹಣ ಮಂಜೂರು ಮಾಡಲು ಸರ್ಕಾರ ಮುಂದಾಗಿದೆ.
ಒಟ್ಟಿನಲ್ಲಿ ಜನಸಾಮಾನ್ಯರ ಹೋರಾಟಕ್ಕೆ ಜಯ, ಶಾಸಕ ಟಿ.ಡಿ ರಾಜೇಗೌಡರ ಪ್ರಯತ್ನಕ್ಕೆ ಫಲ ಸಿಕ್ಕಿದಂತಾಗಿದೆ.
