ಕಲಬುರಗಿ (ಮೇ.2): ಕಲಬುರಗಿಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ಜಾತಿನಿಂದನೆ ಕೇಸ್ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊ೦ಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊ೦ಡ ಯುವಕನ ಹೆಸರು 23 ವರ್ಷದ ನಿಖಿಲ್ ಪೂಜಾರಿ ಎಂದು ತಿಳಿದುಬಂದಿದೆ.
ಲಾಡಮುಗಳಿ ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ಜಾತ್ರೆ ನಡೆದಿತ್ತು. ಈ ಜಾತ್ರೆ ವೇಳೆ ಎರಡು ಸಮುದಾಯಗಳ ಯುವಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊ೦ಡಿ೦ದ್ರು. ನಂತರ ಊರವರೆಲ್ಲರೂ ಸೇರಿ ಯುವಕರಿಗೆ ಬುದ್ಧಿ ಮಾತು ಹೇಳಿ ಸಂಧಾನ ಮಾಡಿಸಿದ್ದರು. ಆದರೂ ಕೆಲ ಯುವಕರು ನಿಖಿಲ್ ಪೂಜಾರಿ ಸೇರಿದಂತೆ ಹಲವರ ವಿರುದ್ಧ ನರೋಣಾ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಿಸಿದ್ದರು. ಇದಕ್ಕೆ ಹೆದರಿ ಬಾಳಿ ಬದುಕಬೇಕಾದ ಯುವಕ ನಿಖಿಲ್ ಪೂಜಾರಿ ಗ್ರಾಮದ ಹೊರವಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.