ನವದೆಹಲಿ: ಕೇಂದ್ರ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಮಂಡಿಸಿರುವ ಈ ಬಾರಿಯ ಬಜೆಟ್, ದೇಶದ ಪ್ರತಿ ಪ್ರಜೆಗಳಿಗೂ ಆರ್ಥಿಕ ಶಕ್ತಿ ಕೊಡುವ ಬಜೆಟ್ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಜೆಟ್ 2026-27ನ್ನು ಸ್ವಾಗತಿಸಿದ್ದಾರೆ.
ಇದು ಮುಂದಿನ ವಿಕಸಿತ ಭಾರತ ಕಲ್ಪನೆಗೆ ಆಧಾರವಾಗಲಿದೆ ಎಂದು ಹೇಳಿದ ಸಂಸದ ಕೋಟ ಮಹಿಳೆಯರ ಅಭಿವೃದ್ಧಿ, ಶಿಕ್ಷಣಕ್ಕೆ ಪ್ರೋತ್ಸಾಹ, ದೇಶದ ರಕ್ಷಣೆ, ಕೈಗಾರಿಕೆಗಳಿಗೆ ಪ್ರೋತ್ಸಾಹವೂ ಸೇರಿದಂತೆ, ದೇಶದ ಮೂಲಭೂತ ಅಭಿವೃದ್ಧಿಗೆ ಬಜೆಟ್ ಹೆಚ್ಚು ಶಕ್ತಿ ಕೊಟ್ಟಿದೆ ಎಂದಿದ್ದಾರೆ.
ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಶಕ್ತಿ :ಹೊಸ ಬಜೆಟ್ ನಲ್ಲಿ ಗ್ರಾಮೀಣ ಅಭಿವೃದ್ಧಿಗೆ 2.73 ಲಕ್ಷ ಕೋಟಿ ಮೀಸಲಿರಿಸಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ರಸ್ತೆ, ಸೇತುವೆಗಳು ಹಾಗೂ ಜನರ ಸೌಕರ್ಯಗಳಿಗೆ ಆರ್ಥಿಕ ಶಕ್ತಿ ನೀಡಿದಂತಾಗಿದೆ.
ಹೊಸ ಜಲಮಾರ್ಗಗಳಿಗೆ ಉತ್ತೇಜನ, ಮೀನುಗಾರಿಕೆಗೆ ಪ್ರೋತ್ಸಾಹ, ಮಹಿಳಾ ಉದ್ಯಮಕ್ಕೆ ಆರ್ಥಿಕ ಸಹಾಯ, ನಶಿಸುತ್ತಿರುವ ಬೀಡಿ ಉದ್ಯಮಕ್ಕೆ ನೆರವು, ಸಂಕಷ್ಟದಲ್ಲಿರುವ ಗೋಡಂಬಿ ಉದ್ಯಮಕ್ಕೆ ಸಹಾಯ, ತೆಂಗು ಬೆಳೆಗಾರರಿಗೆ ಹೊಸ ತಳಿಯ ಕೊಡುಗೆ, ಶ್ರೀಗಂಧ ಬೆಳೆಗಾರರಿಗೆ ಶಕ್ತಿ ನೀಡುವ ಯೋಜನೆ, ನೂತನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ. ದೇಶದಲ್ಲಿ 5 ಕಡೆ ಮೆಡಿಕಲ್ ಹಬ್ ಗಳ ನಿರ್ಮಾಣ, ಹೊಸ ಹೈ ಸ್ಪೀಡ್ ರೈಲುಗಳ ಘೋಷಣೆ, ಜಲಮಾರ್ಗಗಳಿಗೆ ಉತ್ತೇಜನ, ಪ್ರತಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ, ಕ್ಯಾನ್ಸರ್ ಮತ್ತು ವಿರಳ ಕಾಯಿಲೆಗೆ ನೆರವು, ಬೆಂಗಳೂರು ಸೇರಿದಂತೆ ಹಲವೆಡೆ ಹೈ ಸ್ಪೀಡ್ ರೈಲು ಸೇವೆಗೆ ಅವಕಾಶ, ಕೇಂದ್ರದ ಹಣಕಾಸಿನ ಆಯೋಗದ ಶಿಫಾರಸಿನ ಮೇರೆಗೆ ರಾಜ್ಯಗಳಿಗೆ 1.41 ಲಕ್ಷ ಕೋಟಿ ನೀಡುವ ಘೋಷಣೆ, ನಗರಾಡಳಿತ ಅದರಲ್ಲೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ವಿಶೇಷ ಆರ್ಥಿಕ ನೆರವು ಕೇಂದ್ರ ಹಣಕಾಸು ಸಚಿವರು ಪ್ರಾಧಾನ್ಯತೆ ನೀಡಿದ್ದು ಸ್ವಾಗತಾರ್ಹ ಎಂದು ಸಂಸದ ಕೋಟ ತಿಳಿಸಿದ್ದಾರೆ. 12 ವರ್ಷಗಳ ಹಿಂದೆ ಭಾರತ ಸರ್ಕಾರದ ಅಧಿಕಾರ ವಹಿಸಿಕೊಂಡ ಪ್ರಧಾನ ಮಂತ್ರಿ ಮೋದಿಯವರು ಪ್ರಚಾರಕ್ಕಾಗಿ ರಾಜಕಾರಣ ಮಾಡದೆ ಆರ್ಥಿಕ ಶಕ್ತಿ, ಹಣದುಬ್ಬರ ನಿಯಂತ್ರಣ ಮಾಡಿ ದೇಶದ ಜನಸಾಮಾನ್ಯರ ಹಿತ ರಕ್ಷಿಸಿದ್ದಾರೆ. ಈ ಬಾರಿಯ ಬಜೆಟ್ ಕೂಡ ದೇಶದ ಆರ್ಥಿಕ ಅಭಿವೃದ್ಧಿಯ ಹೆಗ್ಗುರುತು ಎಂದು ಕೋಟ ಬಣ್ಣಿಸಿದ್ದಾರೆ.
