ಹಾಸನ: ಕೇಂದ್ರ ಸರ್ಕಾರ ಸಮರ್ಪಕವಾಗಿ ನೀಡಿರುವ ರಸಗೊಬ್ಬರವನ್ನು ಸರಿಯಾಗಿ ರೈತರಿಗೆ ಹಂಚಿಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಯುವ ಮೋರ್ಚಾ ವತಿಯಿಂದ ಸಂತೆಪೇಟೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬೇಲೂರು ಕ್ಷೇತ್ರ ಶಾಸಕ ಎಚ್.ಕೆ. ಸುರೇಶ್ ಮತ್ತು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ರಾಜ್ಯದಲ್ಲಿ ರೈತರಿಗೆ ಕಳಪೆ ಬಿತ್ತನೆ ಬೀಜ ಬಿತ್ತರಿಸಿರುವುದು ಮತ್ತು ರಸಗೊಬ್ಬರ ಕೊರತೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಖಂಡಿಸುತ್ತದೆ. ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ನಾಡಿನ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾದ ದಿನದಿಂದ ಈ ನಾಡಿನ ರೈತರಿಗೆ ಒಳಿತಾಗುವಂತಹ ಯಾವುದೇ ಕ್ರಮವನ್ನು ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ರೈತ ಯೂವ ಮೋರ್ಚಾ ಆಕ್ಷೇಪಿಸುತ್ತದೆ.

ರಾಜ್ಯದಲ್ಲಿ ರಸಗೊಬ್ಬರ ದಂಧೆ ನಡೆಯುತ್ತಿದ್ದು, ರೈತರು ಎರಡುಪಟ್ಟು ಮೂರು ಪಟ್ಟು ಹಣ ಕೊಟ್ಟು ಯೂರಿಯಾ ಗೊಬ್ಬರವನ್ನು ಖರೀದಿ ಮಾಡುವ ರೀತಿ ಆಗಿದೆ.ರೈತರಿಗೆ ಉತ್ತಮ ಬೀಜ ನೀಡದೇ ಕಳಪೆ ಬೀಜವನ್ನು ಕೊಡಲಾಗುತ್ತಿದೆ.ರೈತರು ಕಂಗಲಾಗಿ ಪರದಾಡುತ್ತಿದ್ದಾರೆ.ಇದರ ಪರಿಣಾಮವೇ ಇಂದು ಬೀದಿಹಿಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು ಕೇಂದ್ರ ಕೃಷಿ ಸಚಿವರು ಜಾಗೃತರಾಗಿ ಕಳಪೆ ಗೊಬ್ಬರ ಮತ್ತು ಬೀಜಗಳನ್ನು ನೀಡುವ ಏಜನ್ಸಿಗಳನ್ನ ಈ ಕೂಡಲೇ ಮುಚ್ಚಬೇಕು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಿ ಸರಿಯಾದ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಿ.ಎಚ್.ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ನಟರಾಜು, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಶಕುನೇಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಗಿರೀಶ್, ಪ್ರಸನ್ನ ಕುಮಾರ್, ಶೋಭನ್ ಬಾಬು, ವಿಜಯಲಕ್ಷ್ಮಿ, ಅಂಜನಪ್ಪ, ರಾಜ್ ಕುಮಾರ್ ಇತರರು ಉಪಸ್ಥಿತರಿದ್ದರು.