
ಹಾಸನ: ಜೆಡಿಎಸ್ ಶಾಸಕ ಸಿ.ಎನ್ ಬಾಲಕೃಷ್ಣ ಹಾಗೂ ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್ ಲಿಂಗೇಶ್ ಸೇರಿದಂತೆ ಕೆಲ ಜೆಡಿಎಸ್ ನಾಯಕರು ಹೊಳೆನರಸೀಪುರದ ಭವಾನಿ ರೇವಣ್ಣ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಒಂದೆಡೆ ಹೆಚ್.ಡಿ ರೇವಣ್ಣ ಬಂಧನವಾಗಿದ್ರೆ ಮತ್ತೊಂದೆಡೆ ವಿದೇಶಕ್ಕೆ ಪ್ರಜ್ವಲ್ ಪರಾರಿಯಾಗಿರುವ ಬೆನ್ನಲ್ಲೇ ಧೈರ್ಯ ಕಳೆದುಕೊಳ್ಳಬೇಡಿ ಅನ್ನೋ ಸಾಂತ್ವನದ ಮಾತುಗಳನ್ನ ಹೇಳಿದ್ರು ಎನ್ನಲಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭವಾನಿ ರೇವಣ್ಣ ಜೊತೆ ಜೆಡಿಎಸ್ ನಾಯಕರು ಸಮಾಲೋಚನೆ ನಡಿಸಿ ಏಕಾಂಗಿಯಾಗಿರೋ ಭವಾನಿ ರೇವಣ್ಣಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ರು
ಭವಾನಿ ಭೇಟಿಗೂ ಮುನ್ನ ಸುದ್ದಿಗೋಷ್ಠಿ ನಡೆಸಿದ ನಾಯಕರು

ಇನ್ನೂ ಭವಾನಿ ರೇವಣ್ಣ ಭೇಟಿಗೂ ಮುನ್ನ ಜೆಡಿಎಸ್ ನಾಯಕರು ಹಾಸನದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ಹೆಚ್.ಡಿ ರೇವಣ್ಣರವರ 40 ವರ್ಷದ ರಾಜಕೀಯದಲ್ಲಿ ಯಾವುದೇ ಆರೋಪ ಇಲ್ಲ. ರೇವಣ್ಣನವರ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಅಂತಾ ಜೆಡಿಎಸ್ ನಾಯಕರು ಆರೋಪಿಸಿದ್ರು. ಎಸ್.ಐ.ಟಿ ಅಧಿಕಾರಿಗಳು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಬೇಕು ಅಂತಾ ಆಗ್ರಹಿಸಿದ್ರು. ಪೆನ್ ಡ್ರೈವ್ ವಿಚಾರವನ್ನ ನಾವು ಸಮರ್ಥನೆ ಮಾಡಲ್ಲ ಎನ್ನುತ್ತಾ ಪ್ರಜ್ವಲ್ ಪರ ನಿಲ್ಲಲ್ಲ ಅನ್ನೋದನ್ನ ಜೆಡಿಎಸ್ ನಾಯಕರು ಪರೋಕ್ಷವಾಗಿ ಹೇಳಿದ್ರು. ಆದರೆ ಹೆಚ್.ಡಿ ರೇವಣ್ಣನವರನ್ನ, ದೇವೇಗೌಡರನ್ನ ರಾಜಕೀಯವಾಗಿ ತುಳಿಯಲು ಪಿತೂರಿ ನಡೆಸಲಾಗಿದೆ ಅಂತಾ ಗಂಭೀರ ಆರೋಪ ಮಾಡಿದ್ರು.
ಪ್ರಜ್ವಲ್ ರಾಸಲೀಲೆ ಪ್ರಕರಣ, ಹೊರಗೆ ಕಾಣಿಸಿಕೊಳ್ಳದ ಭವಾನಿ ರೇವಣ್ಣ.!
ಯಾವಾಗ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ಹೊರಗೆ ಬಂತೋ ಅಂದಿನಿಂದಲೂ ಭವಾನಿ ರೇವಣ್ಣ ಹೊರಗಡೆ ಕಾಣಿಸಿಕೊಳ್ಳುತ್ತಿಲ್ಲ. ಎಸ್.ಐ.ಟಿ ಅಧಿಕಾರಿಗಳು ಮನೆಗೆ ಬಂದಾಗಲೂ ಮನೆಯ ಒಳಗಡೆಯೇ ಭವಾನಿ ರೇವಣ್ಣ ಇದ್ರು. ಅಂದು ಕೂಡ ಮಾಧ್ಯಮದವರ ಕಣ್ಣಿಗೆ ಭವಾನಿ ರೇವಣ್ಣ ಬಿದ್ದಿರಲಿಲ್ಲ. ಸದ್ಯ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವ ಭವಾನಿ ರೇವಣ್ಣ, ತೆರೆಮರೆಯಲ್ಲೇ ಹೆಚ್.ಡಿ ರೇವಣ್ಣರನ್ನ ಬಂಧನ ಮುಕ್ತಿಗೊಳಿಸಲು ಕಾರ್ಯತಂತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಜ್ವಲ್ ಕೂಡ ವಿದೇಶಕ್ಕೆ ಹಾರಿರೋದ್ರಿಂದ ಭಾರೀ ಮುಜುಗರಕ್ಕೆ ಒಳಗಾಗಿರುವ ಭವಾನಿ ರೇವಣ್ಣ, ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇಂದು ಜೆಡಿಎಸ್ ನಾಯಕರು ಅವರನ್ನ ಭೇಟಿ ಮಾಡಿದ ಪೋಟೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.
