ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ದೆಹಲಿಯ ಭಾರತ ಮಂಡಪಂನಲ್ಲಿ ಆಯೋಜಿಸಲಾಗಿದ್ದ ವಿಕಸಿತ ಭಾರತ ಯಂಗ್ ಲೀಡರ್ ಡೈಲಾಗ್ 2026 ಸಮಾವೇಶದಲ್ಲಿ ಕರ್ನಾಟಕದ ಯುವ ಪ್ರತಿಭೆ ಸಂಜಯಕುಮಾರ ಬಿರಾದಾರ ರಾಜ್ಯವನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆದ ಈ ಬೌದ್ಧಿಕ ಸಂವಾದದಲ್ಲಿ ಸಂಜಯಕುಮಾರ ಅವರನ್ನು ಪಾಥ್ ಬ್ರೇಕರ್ ಎಂದು ವಿಶೇಷವಾಗಿ ಆಹ್ವಾನಿಸಲಾಗಿತ್ತು.
ನಾಲ್ಕು ದಿನಗಳ ಕಾಲ ನಡೆದ ಈ ಅದ್ಧೂರಿ ಸಮಾವೇಶದಲ್ಲಿ ಸಂಜಯಕುಮಾರ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ತೀರ ಹತ್ತಿರದಲ್ಲಿ ಕುಳಿತುಕೊಳ್ಳುವ ಅಪರೂಪದ ಅವಕಾಶ ದೊರೆಯಿತು. ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿಯವರ ಜೊತೆಗೂಡಿ ವಂದೇ ಮಾತರಂ ಗೀತೆ ಹಾಡುವ ಮೂಲಕ ಈ ಗ್ರಾಮೀಣ ಭಾಗದ ಯುವಕ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯಾ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮದವರಾದ ಸಂಜಯಕುಮಾರ ಸದ್ಯ ಧಾರವಾಡವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದಾರೆ. ಇವರು ಇತ್ತೀಚೆಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರೀಯ ಸೇವಾ ಯೋಜನೆ ಪ್ರಶಸ್ತಿ ಪಡೆದಿದ್ದರು. ಅಲ್ಲದೆ ಪ್ರಸ್ತುತ ಕಾಮನ್ವೆಲ್ತ್ ಯೂಥ್ ಕ್ಲೈಮೇಟ್ ಚೇಂಜ್ ನೆಟ್ವರ್ಕ್ ಇಂಡಿಯಾ ಲೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರಗಳು ಮತ್ತು ಯುವ ಸಬಲೀಕರಣದಲ್ಲಿ ಸಂಜಯಕುಮಾರ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗುಜರಾತ್ನಲ್ಲಿ ನಡೆದ ಏಕತಾ ಓಟದಲ್ಲಿ ಅರಾವಳಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಇವರ ನಾಯಕತ್ವ ಗುಣವನ್ನು ಗುರುತಿಸಿ ಈ ಮಹತ್ವದ ಸಂವಾದಕ್ಕೆ ಆಯ್ಕೆ ಮಾಡಲಾಗಿತ್ತು. ಪ್ರಧಾನ ಮಂತ್ರಿಗಳನ್ನು ಇಷ್ಟು ಹತ್ತಿರದಿಂದ ನೋಡಿ, ಅವರ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದು ನನ್ನ ಜೀವನದ ಸೌಭಾಗ್ಯ ಮತ್ತು ಕರ್ನಾಟಕವನ್ನು ಈ ವೇದಿಕೆಯಲ್ಲಿ ಪ್ರತಿನಿಧಿಸಿದ್ದು ನನಗೆ ಹೆಮ್ಮೆ ತಂದಿದೆ ಎಂದು ಸಂಜಯಕುಮಾರ ಬಿರಾದಾರ ಸಂತಸ ಹಂಚಿಕೊಂಡಿದ್ದಾರೆ.
