ಚಿಕ್ಕಮಗಳೂರು : ನಯನಾ ಮೋಟಮ್ಮನವರೇ, ನೀವು ಕೇವಲ ‘ನಯನಾ ಮೋಟಮ್ಮ/ Nayana Jhwar ಆಗಿದ್ರೆ ನಾನು ನಿಮ್ಮ ಬಗ್ಗೆ ಮಾತಾಡೋಕೆ ಬರ್ತಾ ಇರಲಿಲ್ಲ.! ನೀವು ಮೂಡಿಗೆರೆ ಕ್ಷೇತ್ರದ ‘ಶಾಸಕಿ’. ನಿಮ್ಮ ಸ್ಥಾನದಲ್ಲಿ ಅದ್ಯಾರೋ ಇದ್ದಿದ್ರೂ ಅವರು ಜವಾಬ್ದಾರಿ ಮರೆತಾಗ, ಅದನ್ನ ನೆನಪಿಸುವ ಕೆಲಸವನ್ನ ನಾನು ಮಾಡ್ತಿದ್ದೆ.. ಈ ಹಿಂದೆಯೂ ಮಾಡಿದ್ದೀನಿ.. ನೋ ಡೌಟ್, ಮುಂದೆಯೂ ಮಾಡೇ ಮಾಡ್ತೀನಿ..! ಮತ್ತೊಮ್ಮೆ ನೆನಪಿಟ್ಟುಕೊಳ್ಳಿ, ನೀವು ನಯನಾ ಮೋಟಮ್ಮ ಅಂತಾ ನಿಮ್ಮ ಕೆಲಸಗಳ ಬಗ್ಗೆ ಮಾತಾಡ್ತಿಲ್ಲ, ನೀವು ಮೂಡಿಗೆರೆ ಕ್ಷೇತ್ರದ ‘ಶಾಸಕರು’ ಆಗಿರೋದ್ರಿಂದ ಮಾತಾಡ್ತಾ ಇದ್ದೀನಿ.. ಓಕೆ.!
ನಿಮ್ಮ ‘ಜನಪರ’ ಕೆಲಸಗಳ ಬಗ್ಗೆ ಮಾತಾಡೋಕೆ ನನಗೆ ಬರಲ್ಲ ಅನ್ನೋದು ಗೊತ್ತಿದೆ ಅಂತಾ ನೀವು ಬರೆದಿದ್ದೀರಿ.. ‘ಜನಪರ’ ಕೆಲಸ ನೀವು ಮಾಡ್ತಾ ಇದ್ದೀರಿ ಅಂತಾ ನೀವೇ ಬೆನ್ನು ತಟ್ಟಿಕೊಳ್ಳೊದಲ್ಲ, ಬದಲಾಗಿ ಜನ ಹೇಳ್ಬೇಕು ಮೇಡಂ, ನೀವು ಜನಪರವಾಗಿ ಇದ್ದೀರೋ, ಜನವಿರೋಧಿ ಇದ್ದಿರೋ.. ‘ನಾನು’, ‘ನನ್ನಿಂದಲೇ’ ಅಂತಾ ‘ಸರ್ವಾಧಿಕಾರಿ’ ಧೋರಣೆ ಮಾಡ್ತಾ ಇದ್ದಿರೋ ಅನ್ನೋದನ್ನ ಜನ ಹೇಳ್ಬೇಕು.! ಮಿಗಿಲಾಗಿ ಜನರ ಕೆಲಸ ಮಾಡೋಕೆ ಅಂತಾನೇ ನಿಮ್ಮನ್ನ ಜನರು ಮತಭಿಕ್ಷೆ ಹಾಕಿ ಗೆಲ್ಲಿಸಿರೋದು, ಸರ್ಕಾರ ಅದಕ್ಕಾಗಿಯೇ ನಿಮಗೆ ಅಧಿಕಾರ, ಸಂಬಳ ಸೇರಿ ಎಲ್ಲಾ ಸೌಲಭ್ಯ-ಸವಲತ್ತು ಒದಗಿಸಿರೋದು. ಇದನ್ನ ಮೀರಿ ತಾವೇನಾದ್ರೂ ಅತಿಮಾನುಷ ರೀತಿಯಲ್ಲಿ ಯಾರು ಮಾಡಲು ಸಾಧ್ಯವಾಗದನ್ನ ಜಾದೂ ರೀತಿಯಲ್ಲಿ ಮಾಡಿ ಮುಗಿಸಿದ್ರೆ, ಭೇಷ್ ಅನ್ನಬಹುದಿತ್ತು..
ಆದರೆ ಒಬ್ಬ ಶಾಸಕ/ಶಾಸಕಿ ಏನು ಕೆಲಸ ಮಾಡಬೇಕು, ಯಾವ ಜವಾಬ್ದಾರಿ ಹೊರಬೇಕು ಅದನ್ನೇ ತಾವು ಮಾಡುತ್ತಿಲ್ಲ.! ಹೀಗಿರುವಾಗ ತಾವು ಜನಪರ ಕೆಲಸ ಮಾಡಿದ್ದೀನಿ ಅಂತಾ ಹೇಳಿಕೊಳ್ಳುವುದು ನಿಮಗೆ ಖುಷಿ ತರುತ್ತೆ ಅನ್ನೋದಾದ್ರೆ ಹೇಳಿಕೊಳ್ಳಿ.. ನನ್ನ ಅಭ್ಯಂತರವೇನೂ ಇಲ್ಲ.!

ಒಬ್ಬ ಮುಗ್ದ ಪಂಚಾಯತ್ ಸದಸ್ಯರನ್ನ ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ ಅಂತಾ ಹಾಕಿದ್ದೀರಿ.! ಯೆಸ್, ನವೀನ್ ಹಾವಳಿ ಮುಗ್ಧನೇ.. ಆದರೆ ಅವರಿಗೆ ತನ್ನ ಬುದ್ಧಿ ಸ್ಥಿಮಿತದಲ್ಲಿದೆ, ತನ್ನ ಬುದ್ದಿಯನ್ನ ಬೇರೆಯವರಿಗೆ ಬಾಡಿಗೆಗೆ ಕೊಟ್ಟಿಲ್ಲ.! ಅಷ್ಟಕ್ಕೂ ಬಳಸಿಕೊಳ್ಳುವುದು ಅಂತಾ ಹೇಳಿದ್ದೀರಿ ಅಲ್ವಾ..? ಏನಕ್ಕಾಗಿ ನಾನು ಅವರನ್ನ ಬಳಸಿಕೊಳ್ಳಬೇಕು..? ನೀವೇನು ನನ್ನ ವಿರೋಧಿನಾ..? ನನ್ನ ಜೀವನದಲ್ಲಿ ನಾನು ಯಾರನ್ನೂ ಕೂಡ ಶತ್ರುತ್ವ ಕಟ್ಟಿಕೊಂಡವನಲ್ಲ.. ಹೀಗಿರಬೇಕಾದ್ರೆ, ಜನರ ಸಮಸ್ಯೆಗೆ ನಾನು ಧ್ವನಿಯಾದ್ರೆ, ಅದನ್ನ ತಾವ್ಯಾಕೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತೀರಿ.! ಓಕೆ, ನಿಮ್ಮ ಮಾತಿಗೆ ಬರುತ್ತೇನೆ, ನಾನು ಜನರ ಸಮಸ್ಯೆಗೆ ಧ್ವನಿಯಾಗಿದ್ದು ತಪ್ಪು, ನಿಮ್ಮ ಪ್ರಕಾರ ನಾನು ಜವಾಬ್ದಾರಿ ಮರೆತಿದ್ದೇನೆ, ನೀವು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ನವೀನ್ ರನ್ನ ನಾನು ಬಳಸಿಕೊಂಡಿದ್ದೇನೆ ಅಂತಾ ಆರೋಪ ಮಾಡಿದ್ದೀರಿ.. ಈ ಮಾತಿಗೆ ನೀವು ಬದ್ದರಾಗಿ ಇರಬೇಕು.. ಗಾಳಿಯಲ್ಲಿ ಗುಂಡು ಹೊಡೆಯುದನ್ನ ಬಿಟ್ಟು ಫ್ರೂವ್ ಮಾಡಿ ಅವರನ್ನ ನಾನು ಬಳಸಿಕೊಂಡಿದ್ದೇನೆ ಅನ್ನೋದನ್ನ..! ಆಗ ನಿಮ್ಮ ಮಾತಿಗೆ ತೂಕ ಇರುತ್ತೆ..! ಅದನ್ನ ಬಿಟ್ಟು ಜನರ ಸಮಸ್ಯೆಗೆ ಧ್ವನಿಯಾದವರ ದನಿಯನ್ನ ಅಡಗಿಸೋ ಕೆಲಸ ಮಾಡಬೇಡಿ.!

ಒಂದು ತಿಳ್ಕೊಳ್ಳಿ, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಯಾವತ್ತೂ ಆಡಳಿತ ಪಕ್ಷದ ಕಾರ್ಯವೈಖರಿಯನ್ನ ಪ್ರಶ್ನಿಸೋ ಕೆಲಸ ಮಾಡಬೇಕು. ಅದ್ಯಾವ್ದೋ ಪಕ್ಷ ಆಡಳಿತದಲ್ಲಿ ಇದ್ರೂ ಸರಿನೇ.! ಅವರು ಜವಾಬ್ದಾರಿ ಮರೆತಾಗಲೂ, ನೀವು ಮಾಡಿದ್ದೇ ಸರಿ.. ! ತಪ್ಪು ದಾರಿಯಲ್ಲಿ ಹೋಗ್ತಿದ್ರೂ, ನೀವು ಹೋಗ್ತಾ ಇರೋದೇ ಸರಿ ಅಂತಾ ಹೇಳೋದ್ ಇದೆಯಲ್ಲ ಅದು ನಮ್ಮ ಆತ್ಮಸಾಕ್ಷಿಗೆ ಮಾಡಿಕೊಂಡ ದೊಡ್ಡ ದ್ರೋಹ.! ಯಾವ ಕ್ಷೇತ್ರವಾದ್ರೂ ಹಾದಿ ತಪ್ಪಿದ್ರೆ ಸರಿ ಮಾಡಬಹುದು, ಆದ್ರೆ ಮಾಧ್ಯಮ ಹಾದಿ ತಪ್ಪಿದ್ರೆ, ಮಟಾಶ್..! ಇಡೀ ವ್ಯವಸ್ಥೆಯೇ ಸರ್ವನಾಶ ಆಗುತ್ತೆ.! ಇನ್ನೂ ಮುಂದುವರಿದು ಅದೇನೋ ತಂದಿಟ್ಟು ಮಜಾ ತೆಗೆದುಕೊಳ್ಳುವುದು ಅಂತೆಲ್ಲಾ ಬರೆದಿದ್ದೀರಿ..ಈ ತಂದಿಟ್ಟು ಮಜಾ ತೆಗೆದುಕೊಳ್ಳುವ ಕೆಲಸವನ್ನ ಯಾರು ಮಾಡ್ತಿದ್ದಾರೆ ಅನ್ನೋದನ್ನ ಜನರು ನೋಡ್ತಾ ಇದ್ದಾರೆ.. ! ಯಾವಾಗ ಉತ್ತರ ಕೊಡಬೇಕೋ ಆಗ ಉತ್ತರ ಕೊಡುತ್ತಾರೆ.! ಮೂಡಿಗೆರೆಯಲ್ಲಿ ನೀವು ಸೇರಿದಂತೆ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ನನಗೆ ವಿಶೇಷ ವ್ಯಕ್ತಿಗಳೇ.! ಆ ಸಾಮಾನ್ಯ ಪ್ರಜೆಗಳ ಧ್ವನಿಯಾಗಿ ನಾನೆಂದೂ ಇರುತ್ತೇನೆ.! ನೀವು ಪ್ರೀತಿ ಕೊಡಲ್ಲ ಅಂತಾ ಹೇಳಿದ್ದೀರಿ.. ಧನ್ಯವಾದಗಳು, ಅದು ನಿಮ್ಮ ಮನಸ್ಥಿತಿ.! ಆದ್ರೆ, ಮನುಷ್ಯತ್ವ, ಅಂತಃಕರಣ, ಸಹನುಭೂತಿ, ಕರುಣೆ ಇವುಗಳನ್ನೆಲ್ಲವನ್ನೂ ಹುಟ್ಟಿದಾಗಿನಿಂದಲೇ ಮೈಗೂಡಿಸಿಕೊಂಡಿರೋ ನನಗೆ ನನ್ನ ಪೋಷಕರು, ಗುರುಗಳು, ಹಿರಿಯರು ಜೊತೆಗೆ ಈ ಸಮಾಜ ಯಾರನ್ನೂ ದ್ವೇಷಿಸಬಾರದು ಅಂತಾ ಹೇಳಿಕೊಟ್ಟಿದೆ. ಹಾಗಾಗೀ ಇದೇ ಮಣ್ಣಿನಲ್ಲಿ ಹುಟ್ಟಿರೋ ನಾನು ನಮ್ಮ ಕ್ಷೇತ್ರದ ಶಾಸಕರನ್ನ ದ್ವೇಷಿಸೋದುಂಟೆ..? ಖಂಡಿತಾ ಇಲ್ಲ.. ನಮ್ಮ ಕ್ಷೇತ್ರದ ಶಾಸಕ/ಶಾಸಕಿ ಮೇಲೆ ನನಗೆಂದೂ ಪ್ರೀತಿ ಇದ್ದೇ ಇರುತ್ತೆ..!
(ವಿ.ಸೂ: ಮೇಲೆ ಬರೆದಿರೋದು ನಿನ್ನೆಯ ನಿಮ್ಮ ಪೋಸ್ಟನ್ನ ಉದ್ದೇಶಿಸಿ ಅಷ್ಟೇ..! ಮೂಡಿಗೆರೆಯಲ್ಲಿ ಏನಾಗ್ತಿದೆ, ಯಾರು ದಕ್ಷರು, ಯಾರು ಭ್ರಷ್ಟರು, ಯಾರು ಜನಪರ ಕೆಲಸ ಮಾಡ್ತಿದ್ದಾರೆ… ಅನ್ನೋ ಸೂಕ್ಷ್ಮತೆಯ ಅರಿವು ನನ್ನಲಿದೆ. ದಾಖಲಾತಿಯೂ ಇದೆ, ಅದನ್ನ ಮುಂದಿನ ದಿನಗಳಲ್ಲಿ ಎಳೆಎಳೆಯಾಗಿ ಬರೆದು ಜನರ ಮುಂದೆಯೇ ಇಡುತ್ತೇನೆ.. ಧನ್ಯವಾದಗಳು ಮೇಡಂ.!)
-ಪ್ರಶಾಂತ್ ಮೂಡ್ಗೆರೆ
