ಚಿಕ್ಕಮಗಳೂರು: ವಿದ್ಯಾರ್ಥಿಗಳನ್ನು ನಕ್ಸಲ್ ಚಳವಳಿಗೆ ನೇಮಕ ಮಾಡಿಕೊಳ್ಳುತ್ತಾರೆಂದು ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸರಕಾರಿ ಹಾಸ್ಟೆಲ್ಗಳು ಮತ್ತು ಅಲ್ಲಿ ವ್ಯಾಸಂಗ ಮಾಡುತ್ತಿರುವ ದುಡಿಯುವ ವರ್ಗದ ಮಕ್ಕಳನ್ನು ಆವಮಾನಿಸಿದ್ದಾರೆ. ಸಿ.ಟಿ.ರವಿ ಹೇಳಿಕೆಯಿಂದಾಗಿ ಹಾಸ್ಟೆಲ್ ಮಕ್ಕಳು ಹಾಗೂ ಅವರ ಪೋಷಕರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ತಮ್ಮ ಹೇಳಿಕೆಗೆ ಸಿ.ಟಿ.ರವಿ ಕೂಡಲೇ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಹಳ್ಳಿಹಳ್ಳಿಗಳಲ್ಲೂ ಅವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಎಚ್ಚರಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದು, ಎರಡು ಬಾರಿ ಸಚಿವರಾಗಿದ್ದರು, ವಿಧಾನ ಪರಿಷತ್ ಸದಸ್ಯರು ಆಗಿದ್ದಾರೆ. ಅಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಬಾಯಿಗೆ ಬಂದಂತೆ ಮಾತನಾಡುವುದನ್ನೂ ಇನ್ನೂ ನಿಲ್ಲಿಸಿಲ್ಲ. ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳ ವ್ಯಾಸಂಗಕ್ಕೆ ಆಶಯ ನೀಡುತ್ತಿರುವ ಸರಕಾರಿ ಹಾಸ್ಟೆಲ್ಗಳ ಬಗ್ಗೆ ಅತ್ಯಂತ ತುಚ್ಚವಾಗಿ ಮಾತನಾಡಿರುವ ಅವರ ಹೇಳಿಕೆ ಖಂಡನೀಯ. ಅವರ ಹೇಳಿಕೆಗೆ ಅವರು ಕೂಡಲೇ ಕ್ಷಮೆಯಾಚನೆ ಮಾಡಬೇಕು. ಸಿ.ಟಿ.ರವಿ ಹೇಳಿಕೆಯಿಂದಾಗಿ ಅನುಮಾನದಿಂದ ನೋಡುವಂತಾಗಿದ್ದು, ಹಾಸ್ಟೆಲ್ ಮಕ್ಕಳು ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳು ಮತ್ತು ಅವರ ಶೋಷಕರು ಗೊಂದಲಕ್ಕೊಳಗಾಗುವಂತಾಗಿದೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪುಟ್ಟಸ್ವಾಮಿ, ನಟರಾಜ್, ಅಣ್ಣಯ, ಭೀಮ್ ಅರ್ಮಿ ಸಂತೋಷ್ ಇದ್ದರು .
