ಉಡುಪಿ: ಬೀದಿ ನಾಯಿಗಳಿಗೆ ಅನ್ನ ಹಾಕಿದ್ದಕ್ಕೆ ದಲಿತ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ: ದ.ಸಂ.ಸ. ಖಂಡನೆ
ಉಡುಪಿ: ಬೀದಿ ನಾಯಿಗಳಿಗೆ ಅನ್ನ ಹಾಕಿದ್ದಕ್ಕೆ ದಲಿತ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಇಂದ್ರಾಳಿ ರೈಲ್ವೇ ಸ್ಟೇಶನ್ ಬಳಿ ನಡೆದಿದೆ. ದಲಿತ ಮಹಿಳೆ ಬೇಬಿ ಎಂಬಾಕೆ ಮೇಲೆ ಚಂದ್ರಕಾಂತ್ ಭಟ್ಟ ಎಂಬುವವರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಇಂದ್ರಾಳಿಯಲ್ಲಿ ಬೀದಿ ನಾಯಿಗಳಿಗೆ ಅನ್ನ ಹಾಕುತ್ತಿದ್ದ ಸಂದರ್ಭ ಚಂದ್ರಕಾಂತ್ ಭಟ್ಟ ರೀಪಿನಿಂದ ಮಹಿಳೆ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಬೇಬಿಯವರ ತಲೆಗೆ ತೀವ್ರ ಪೆಟ್ಟಾಗಿದ್ದು, ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಸುದ್ದಿ ತಿಳಿದು ದ.ಸಂ.ಸ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ನೇತೃತ್ವದಲ್ಲಿ ದ.ಸಂ.ಸ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಯೋಗಕ್ಷೇಮ ವಿಚಾರಿಸಿದ್ದಾರೆ. ಇದೇ ಸಂದರ್ಭ ಹಲ್ಲೆ ಖಂಡಿಸಿದ ದಲಿತ ಸಂಘರ್ಷ ಸಮಿತಿ ಆರೋಪಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದೆ.
