ಹಾಸನ : ಪಕ್ಷದಲ್ಲಿ 15 ವರ್ಷಗಳ ಮೇವು ಹಾಕಿ ಸಾಕಿದ್ರೂ ಒಳ್ಳೆ ಮೇವಿಗಾಗಿ ಬೇರೆಡೆಗೆ ಹೋಗಿದೆ. ಡಿಸಿ, ಎಸ್ಪಿ, ಜಿ.ಪಂ ಸಿಇಒ, ಎಸಿ ನನ್ನ ಕೈಗೆ ಸಿಗದೆ ಎಲ್ಲಿ ಹೋಗ್ತಾರೆ? ಅಕ್ರಮಗಳನ್ನು ಧಾರಾವಾಹಿ ಥರ ಬಿಡುಗಡೆ ಮಾಡ್ತೇನೆ ಅಂತ ಶಾಸಕ ಹೆಚ್.ಡಿ. ರೇವಣ್ಣ ಹೇಳಿದರು.
೧೯೬೨ನೇ ಇಸವಿಯಿಂದ ದೇವೇಗೌಡರಿಗೆ ರಾಜಕೀಯ ಜನ್ಮ ಕೊಟ್ಟ ಜಿಲ್ಲೆ ಹಾಸನ. ಎರಡನೇಯದ್ದು ಬೆಂಗಳೂರು ಗ್ರಾಮಾಂತರ, ಕನಕಪುರ ಕ್ಷೇತ್ರ ದೇವೇಗೌಡರಿಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವ ಕ್ಷೇತ್ರ. ದೇವೇಗೌಡರು ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರಾಗಲು ಜನರು ಸಹಕಾರ ಮಾಡಿದ್ದಾರೆ. ನನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ಏಳಕ್ಕೆ ಏಳು ಕ್ಷೇತ್ರಗಳನ್ನು ಗೆಲ್ಲಿಸಿದ್ದಾರೆ. ನಾನು ಬದುಕಿರುವವರೆಗೂ ಜಿಲ್ಲೆಯ ಜನರನ್ನು ಮರೆಯಲ್ಲ. ಜಿಲ್ಲೆಗೆ ಉಳಿದಿರುವ ಕೆಲಸವನ್ನು ಯಾವುದೇ ಸರ್ಕಾರವಿರಲಿ ಮಾಡುತ್ತೇನೆ. ಏನೇ ಅಡೆ ತಡೆ ಬಂದರು ಕೆಲಸ ಮಾಡುತ್ತೇನೆ ಅಂತ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಐಐಟಿ, ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೆಲವರು ಕಬಳಿಸುತ್ತಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಸನ ಜಿಲ್ಲೆಯ ಲೂಟಿ ಹೊಡೆಯುತ್ತಿದ್ದಾರೆ. ಅದನ್ನು ತಡೆಯಲು ಏನೇನು ಮಾಡಬೇಕು ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದಿಂದ ಐಐಟಿ ಬೇರೆ ಜಿಲ್ಲೆಗೆ ಹೋಯ್ತು. ದೇವೇಗೌಡರು ಬದುಕಿರುವುದರೊಳಗೆ ಐಐಟಿ ತರಲು ಪ್ರಯತ್ನ ಮಾಡುತ್ತೇನೆ. ಅದಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದು, ಎಲ್ಲೆಲ್ಲಿ ಯಾವ್ಯಾವ ಮ್ಯಾಜಿಕ್ ಮಾಡಬೇಕು ಮಾಡ್ತಿನಿ. ಮ್ಯಾಜಿಕ್ ಹೇಗೆ, ಎಲ್ಲಿ ಮಾಡಬೇಕು ಎಂಬುದು ನನಗೆ ಗೊತ್ತಿದೆ ಅಂತ ಸವಾಲು ಹಾಕಿದ್ರು.
ಜಿಲ್ಲಾಧಿಕಾರಿ ಕಚೇರಿ, ಕಂದಾಯ, ಪೊಲೀಸ್ ಇಲಾಖೆ ಒಂದು ಪಕ್ಷದ ಕಚೇರಿ ಆಗಬಾರದು. ಪೊಲೀಸ್ ಇಲಾಖೆಯಲ್ಲಿ ಎಂದೆಂದೂ ಕಾಣದ ದಂಧೆ ನಡೆಯುತ್ತಿದೆ. ಈ ರೀತಿಯ ದಂಧೆ ನಾನು ನೋಡೇ ಇಲ್ಲ. ಮದ್ಯದಂಗಡಿಗಳು ಹೆಚ್ಚಾಗಿವೆ. ಮಟ್ಕಾ, ಜೂಜಾಟ ನಡೆಯುತ್ತಿದೆ, ಕೊಲೆಗಳಾಗುತ್ತಿವೆ, ಪೊಲೀಸ್ ಕಚೇರಿಗೆ ಹೋದರೆ ಇಂತಿಷ್ಟು ಫಿಕ್ಸ್ ಮಾಡ್ತಾರೆ ಎಂದು ಗಂಭೀರ ಆರೋಪ ಮಾಡಿದರು.
