ಕಳಸ: ಕಾಫಿನಾಡಿನಲ್ಲಿ ಕಾಡು ಪ್ರಾಣಿಗಳ ಉಪಟಳಕ್ಕೆ ಬ್ರೇಕ್ ಇಲ್ಲದಂತಾಗಿದೆ. ಪ್ರತಿನಿತ್ಯ ಒಂದಲ್ಲ ಒಂದು ಗ್ರಾಮಗಳಲ್ಲಿ ಕಾಡುಪ್ರಾಣಿಗಳು ಭೀತಿ ಸೃಷ್ಟಿಸುತ್ತಿದ್ದು ಜನ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಆತಂಕ ಶುರುವಾಗಿದ್ದು, ಭಾಗ್ಯಲಕ್ಷ್ಮಿ, ಕುಕ್ಕೊಡು ಮತ್ತು ಕಲ್ಲಾಟ ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದಾರೆ.
ಕಳೆದ ರಾತ್ರಿ ಈ ಭಾಗದ ಜನವಸತಿ ಪ್ರದೇಶದಲ್ಲಿ ಚಿರತೆಯೊಂದು ರಾಜಾರೋಷವಾಗಿ ಓಡಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಈಗ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಾಫಿ ತೋಟಗಳು ಹಾಗೂ ಮನೆಗಳ ಸಮೀಪವೇ ಚಿರತೆ ಪ್ರತ್ಯಕ್ಷವಾಗಿರುವುದು ಜನರನ್ನು ಮನೆಯಿಂದ ಹೊರಬರಲು ಹೆದರುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ರಾತ್ರಿ ವೇಳೆಯಲ್ಲಿ ಜನರು ಒಂಟಿಯಾಗಿ ಓಡಾಡಬಾರದು ಹಾಗೂ ಮಕ್ಕಳು ಮತ್ತು ಸಾಕುಪ್ರಾಣಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ. ಹಗಲು ಹೊತ್ತಿನಲ್ಲಿ ತೋಟದ ಕೆಲಸಕ್ಕೆ ಹೋಗುವವರು ಕೂಡ ಗುಂಪಾಗಿ ಹೋಗುವುದು ಸುರಕ್ಷಿತ ಎಂದು ತಿಳಿಸಲಾಗಿದೆ.
ಭಾಗ್ಯಲಕ್ಷ್ಮಿ, ಕುಕ್ಕೊಡು ಹಾಗೂ ಕಲ್ಲಾಟ ಸುತ್ತಮುತ್ತಲಿನ ಯಾವುದೇ ಭಾಗದಲ್ಲಿ ಚಿರತೆ ಅಥವಾ ವನ್ಯಜೀವಿಗಳು ಕಾಣಿಸಿಕೊಂಡರೆ ಸಾರ್ವಜನಿಕರು ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಚಿರತೆಯನ್ನು ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
