ಮೂಡಿಗೆರೆ: ಅತಿಯಾದ ಮಳೆಯಿಂದ ಮಲೆನಾಡು ಭಾಗದಲ್ಲಿ ಕಾಫಿ, ಕಾಳುಮೆಣಸು, ಅಡಕೆ ಸೇರಿದಂತೆ ಅನೇಕ ಬೆಳೆ ನಾಶವಾಗಿದೆ. ಇದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಫ್ ಪರಿಹಾರ ನಿಧಿಯಿಂದ ಕಾಫಿ ಬೆಳೆಗಾರರಿಗೆ ಪರಿಹಾರ ಒದಗಿಸಬೇಕೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಒತ್ತಾಯಿಸಿದರು.
ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ ವರ್ಷ ಕಾಫಿಗೆ ಉತ್ತಮ ಬೆಲೆ ಇತ್ತು. ಇದರಿಂದ ಕಾಫಿ ಬೆಳೆಗಾರರಿಗೆ ಅನುಕೂಲವಾಗಿತ್ತು. ಆದರೆ ಈ ಬಾರಿ ಕಳೆದ 5 ತಿಂಗಳಿಂದ ಬಿಡದೇ ಮಳೆ ಸುರಿಯುತ್ತಿದೆ. ಬೆಳೆ ಉಳಿಸಿಕೊಳ್ಳಲು ರಾಸಾಯನಿಕ ಗೊಬ್ಬರ ಹಾಕಲು ಕೂಡ ಅವಕಾಶ ಸಿಗುತ್ತಿಲ್ಲ. ಕಾಫಿ, ಕಾಳು ಮೆಣಸು, ಅಡಕೆ ಬೆಳೆ ಶಿಲೀಂದ್ರ ರೋಗಕ್ಕೆ ತುತ್ತಾಗಿ ಫಸಲಿಗೆ ಬಂದ ಬೆಳೆ ಕೈಗೆಟುಕದಂತಾಗಿದೆ. ಇದರಿಂದ ಕಾಫಿ ಬೆಳೆಗಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಕಾಫಿ ಮಂಡಳಿ, ಕೃಷಿ, ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಸಿದ್ದು, ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ತರಿಸಿಕೊಂಡು ಕೂಡಲೇ ಪರಿಹಾರ ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಸ್.ಜಯರಾಂಗೌಡ ಮಾತನಾಡಿ, ಸರ್ಫೇಸಿ ಕಾಯಿದೆಯಡಿ ದೇಶದಲ್ಲಿ ೨೮೦೦ ರೈತರು ಸಿಲುಕಿದ್ದಾರೆ. ಅದರಲ್ಲಿ ಹೆಚ್ಚಾಗಿ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಡದೇ ಸುರಿಯುತ್ತಿರುವ ಮಳೆಯಿಂದ ಸರ್ಪೇಸಿ ಕಾಯಿದೆಯೊಳಪಟ್ಟ ರೈತರು ಸಾಲ ತೀರಿಸಲು ತೊಂದರೆ ಎದುರಾಗಿದೆ. ಈ ಬಗ್ಗೆ ಹಾಸನ, ಮೈಸೂರು, ಚಿಕ್ಕಮಗಳೂರು ವ್ಯಾಪ್ತಿಯ ಎಲ್ಲಾ ಶಾಸಕರು ಹಾಗೂ ಸಂಸದರೊಂದಗೆ ಚರ್ಚಿಸಿದ್ದು, ಅವರು ರೈತರ ನೆರವಿಗೆ ಮುಂದಾಗಿದ್ದಾರೆ. ಮುಖ್ಯವಾಗಿ ಈಗ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಪರಿಹಾರದ ಹಣ ಸಿಗುವಂತೆ ಹಾಗೂ ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಲು ಎಲ್ಲಾ ಶಾಸಕರು ಹಾಗೂ ಸಂಸದರು ಸರಕಾರದ ಗಮನ ಸೆಳೆಯಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಜಿಲ್ಲಾ ವಕ್ತಾರ ಎಂ.ಎಸ್.ಅನಂತ್, ಮುಖಂಡರಾದ ಶಿವಣ್ಣ, ಪ್ರಸನ್ನ ಉಪಸ್ಥಿತರಿದ್ದರು.
