ಸೋಮೇಶ್ವರ(ಮಂಗಳೂರು) : ಹಸುವೊಂದು ಸ್ಥಿಮಿತ ಕಳೆದುಕೊಂಡು ಏಕಾಏಕಿ ಹುಚ್ಚೆದ್ದು ಮನೆಯೊಂದರ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿ, ಅನೇಕರಿಗೆ ತಿವಿದು ಗಾಯಗೊಳಿಸಿದ ಘಟನೆ ಮಂಗಳೂರು ನಗರದ ಸೋಮೇಶ್ವರದಲ್ಲಿ ನಡೆದಿದೆ.
ಎಲ್ಲೆಂದರಲ್ಲಿಗೆ ಓಡಾಡುತ್ತಿದ್ದ ಹಸುವನ್ನು ಸ್ಥಳೀಯರು ಹರಸಾಹಸಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಪಶು ವೈದ್ಯರು ಅರಿವಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಹಸು ಮೃತಪಟ್ಟಿದೆ. ರೇಬೀಸ್ ಸೋಂಕಿನಿಂದ ಈ ರೀತಿ ಆಗಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಸೋಮೇಶ್ವರ ದ್ವಾರದ ಬಳಿಯ ನಿವಾಸಿಗೆ ಸೇರಿದ ಹಸು ಇದಾಗಿದೆ. ಮೇಯಲು ಬಿಟ್ಟಿದ್ದ ಹಸು ನಿನ್ನೆ ಸಂಜೆ ಏಕಾಏಕಿ ಮಹಿಳೆಯೋರ್ವರಿಗೆ ತಿವಿದಿದೆ. ಅಲ್ಲಿಂದ ಮುಂದಕ್ಕೆ ಓಡಿದ ಹಸು ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಬಳಿಗೆ ಸಾಗಿ ಸ್ಕೂಟರ್ ಒಂದಕ್ಕೆ ಗುದ್ದಿದೆ. ಬಳಿಕ ಸಿಕ್ಕ, ಸಿಕ್ಕವರ ಮೇಲೆ ದಾಳಿ ನಡೆಸಿದೆ. ಅಲ್ಲಿದ್ದ ಮನೆಯ ಆವರಣ ಗೋಡೆಯೊಳಕ್ಕೆ ನುಗ್ಗಿ ಧಾಂದಲೆ ನಡೆಸಿದೆ.




