ಗೋಣಿಕೊಪ್ಪ : ಅರಣ್ಯ ಇಲಾಖೆಯ ಕಬ್ಬಿಣದ ಗೇಟ್ನ ಸರಳುಗಳ ಮಧ್ಯೆ ಕಾಡಾನೆಯ ತಲೆ ಸಿಲುಕಿಕೊಂಡು, ಬಳಿಕ ಜೊತೆಗಾರ ಆನೆಯ ನೆರವಿನೊಂದಿಗೆ ಅಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆಯ ತಿತಿಮತಿಯಲ್ಲಿ ನಡೆದಿದೆ.
ಬೆಳಗ್ಗೆ ಕಾಡಾನೆಗಳೆರೆಡು ಆಹಾರ ಅರಸಿಕೊಂಡು ತಿತಿಮತಿಯ ಅರಣ್ಯ ಇಲಾಖೆಯ ಮರ ಸಂಗ್ರಹಗಾರದತ್ತ ಬಂದಿವೆ. ಈ ಪೈಕಿ ಆನೆಯೊಂದು ಕಬ್ಬಿಣದ ಗೇಟ್ ಅನ್ನು ತಳ್ಳುವಾಗ ಸೊಂಡಿಲು ಸಮೇತ ಕುತ್ತಿಗೆಯ ಭಾಗ ಸಿಕ್ಕಿಕೊಂಡಿದೆ. ಅದರಿಂದ ಹೊರ ಬರಲಾಗದೇ ಘೀಳಿಡತೊಡಗಿದೆ. ಅದರ ಗೋಳು ನೋಡಲಾಗದೆ ಜೊತೆಗಿದ್ದ ಮತ್ತೊಂದು ಕಾಡಾನೆ ತಕ್ಷಣ ನೆರವಿಗೆ ಧಾವಿಸಿದೆ.
ತನ್ನ ತಲೆಯ ಭಾಗದಿಂದ ಗೇಟ್ ಅನ್ನು ತಳ್ಳಿ ಸಂಕಷ್ಟದಲ್ಲಿದ್ದ ಆನೆಯ ತಲೆ ಆ ಸರಳಿನಿಂದ ಹೊರಬರಲು ನೆರವಾಗಿದೆ. ನಂತರ ಎರಡು ಆನೆಗಳು ಅಲ್ಲಿಂದ ಕಾಡು ಸೇರಿವೆ.
