ಬಾಳೆಹೊನ್ನೂರು: ಶಿಕಾರಿ ಮಾಡಿದ ಹೆಣ್ಣು ಜಿಂಕೆಯನ್ನು ಅಲ್ಟೋ ಕಾರಿನಲ್ಲಿ ಬಾಳೆಹೊನ್ನೂರಿನಿಂದ ನರಸಿಂಹರಾಜಪುರ ಕಡೆಗೆ ಸಾಗಿಸುತ್ತಿದ್ದವರ ಮೇಲೆ ಕೊಪ್ಪ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಿಂಕೆ ಕಳೇಬರ ಹಾಗೂ ಕಾರನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಹೌದು .. ಬಾಳೆಹೊನ್ನೂರು ಭಾಗದಿಂದ ನರಸಿಂಹರಾಜಪುರದ ಕಡೆಗೆ ಬರುತ್ತಿದ್ದಾಗ ಚಿಕ್ಕ ಅಗ್ರಹಾರದ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಕಾರನ್ನು ತಡೆದಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ. ಗುಬ್ಬಿಗಾ ಗ್ರಾಮದ ಜಿ.ಎನ್. ಭರತ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಚಿಕ್ಕಅಗ್ರಹಾರ ಉಪ ವಲಯ ಅರಣ್ಯಾಧಿಕಾರಿ ಎಚ್.ಬಿ.ನಂದೀಶ, ಕುದುರೆಗುಂಡಿ ಉಪ ವಲಯ ಅರಣ್ಯಾಧಿಕಾರಿ ರಂಗನಾಥ ಅತಾಲಟ್ಟಿ, ಗಸ್ತು ಅರಣ್ಯ ಪಾಲಕರಾದ ರಂಗಸ್ವಾಮಿ, ಸಿದ್ದೇಶ್, ಪ್ರತಾಪ್, ಅರಣ್ಯ ವೀಕ್ಷಕರಾದ ರವಿ, ಗಣೇಶ್, ವಾಹನ ಚಾಲಕ ಜಗದೀಶ್ ಭಾಗಿಯಾಗಿದ್ದರು.
