ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ನುಡಿ ಹೊರಬಿದ್ದಿದೆ. ಕಡೂರು ತಾಲೂಕಿನ ಬೀರೂರಿನ ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಅರ್ಚಕ ದಶರಥ ಪೂಜಾರ್ ಅವರು ಕಾರ್ಣಿಕ ನುಡಿದಿದ್ದಾರೆ.
‘ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಧರ್ಮ – ಅಧರ್ಮ ಸಂಕಷ್ಟವಾಯಿತು. ವಿಶ್ವಕ್ಕೆ ಶಾಂತಿಯ ಭಂಗವಾಯಿತು. ಧರೆಗೆ ವರುಣನ ಆಗಮನವಾಯಿತು. ಸರ್ವರು ಎಚ್ಚರದಿಂದಿರಬೇಕು ಪರಾಕ್’ ಎಂದು ಭವಿಷ್ಯ ನುಡಿದಿದ್ದಾರೆ.
ಧರ್ಮ ಮತ್ತು ಅಧರ್ಮಗಳ ನಡುವಿನ ಸಂಘರ್ಷವು ಹೆಚ್ಚಾಗಿ ಜಾಗತಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಇದರೊಂದಿಗೆ, ಧರೆಗೆ ವರುಣನ ಆಗಮನವಾಯಿತು ಎಂಬ ನುಡಿಯು ಉತ್ತಮ ಮಳೆ ಮತ್ತು ಸುಭಿಕ್ಷತೆಯ ನಿರೀಕ್ಷೆಯನ್ನು ಹುಟ್ಟಿಸಿದೆ.
ಇಲ್ಲಿ ನುಡಿಯುವ ಕಾರ್ಣಿಕವು ವರ್ಷದೊಳಗೆ ನೆರವೇರುತ್ತದೆ ಎಂಬ ನಂಬಿಕೆ ಈ ಪ್ರದೇಶದ ಜನರಲ್ಲಿದೆ. ದಶರಥ ಪೂಜಾರರು ದಸರಾದ 9-10 ದಿನಗಳ ಕಾಲ ಅತ್ಯಂತ ಮಡಿಯಿಂದ ಇದ್ದು, ಕಾರ್ಣಿಕ ನುಡಿಯುವ ಕೊನೆ ದಿನ ನೀರನ್ನೂ ಕುಡಿಯದೇ ಉಪವಾಸದಿಂದಿದ್ದು ಪೂಜೆ ಸಲ್ಲಿಸುತ್ತಾರೆ. ಬಳಿಕ ಉಪಹಾರ ಸೇವಿಸುತ್ತಾರೆ.
