ಚಿಕ್ಕಮಗಳೂರು: ಸಾಮಾಜಿಕ – ಶೈಕ್ಷಣಿಕ ಸರ್ವೇ ಕಾರ್ಯಕ್ಕೆ ತೆರಳಿದ್ದ ಶಿಕ್ಷಕನ ಮೇಲೆ ಬೀದಿ ನಾಯಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.
ಶಿಕ್ಷಕ ಕೃಷ್ಣಪ್ಪ (54) ಅವರ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ನಾಯಿ ದಾಳಿಯಿಂದ ಅವರ ಕಾಲಿನ ಭಾಗಕ್ಕೆ ಭಾರೀ ಹಾನಿಯಾಗಿದೆ. ನಾಯಿಯ ಹಲ್ಲು ಸುಮಾರು ಒಂದು ಇಂಚು ಆಳಕ್ಕೆ ನಾಟಿದೆ. ಅವರಿಗೆ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸರ್ವೇ ಕಾರ್ಯದ ಭಾಗವಾಗಿ ಕೆಲ ಮನೆಗಳಲ್ಲಿನ ಯು.ಹೆಚ್.ಐ.ಡಿ. ನಂಬರ್ ಪೆಂಡಿಂಗ್ ತೋರಿಸುತ್ತಿತ್ತು. ಈ ಕಾರಣಕ್ಕೆ ಮೀಟರ್ ಬೋರ್ಡಿನಲ್ಲಿರುವ ಆರ್.ಆರ್ ನಂಬರ್ ಪಡೆಯಲು ಕೃಷ್ಣಪ್ಪ ಅವರು ತೆರಳಿದ್ದರು. ಈ ಸಂದರ್ಭದಲ್ಲಿ ನಾಯಿ ದಾಳಿ ನಡೆಸಿದೆ.
ಕೃಷ್ಣಪ್ಪ ಅವರ ಪರವಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿರುವ ಕೆಲ ಶಿಕ್ಷಕರು, ಸರ್ವೇಯಲ್ಲಿನ ತಾಂತ್ರಿಕ ಅಡಚಣೆಗಳೇ ನಾಯಿ ದಾಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ತಾಂತ್ರಿಕ ಸಮಸ್ಯೆಗಳು ಮತ್ತು ಸುರಕ್ಷತಾ ಕೊರತೆಯಿಂದಾಗಿ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
