ಚಿಕ್ಕಮಗಳೂರು: ಸ್ಮಶಾನ ಒತ್ತುವರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಆ ಜಾಗಕ್ಕೆ ಗ್ರಾಮಸ್ಥರೇ ಬೇಲಿ ಹಾಕಿದ ಘಟನೆ ಚಿಕ್ಕಮಗಳೂರು ಹೊರವಲಯದ ಲಕ್ಷ್ಮಿಪುರದಲ್ಲಿ ನಡೆದಿದೆ.
ಹೌದು, ಹಿರೇಮಗಳೂರಿನ ಲಕ್ಷ್ಮೀಪುರದಲ್ಲಿ ಸ್ಮಶಾನ ಜಾಗವನ್ನೇ ಒತ್ತುವರಿ ಮಾಡಿರೋ ಆರೋಪ ಕೇಳಿ ಬಂದಿದೆ. ಜಯಣ್ಣ ಎಂಬ ವ್ಯಕ್ತಿ, ಮಾದಿಗ ಸಮುದಾಯದ ಸ್ಮಶಾನವನ್ನ ಒತ್ತುವರಿ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈವರೆಗೂ ಅನೇಕ ಸಲ ಡಿಸಿ, ತಹಶೀಲ್ದಾರ್, ಶಾಸಕರಿಗೆ ದೂರು ಕೊಟ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾ ಊರಿನವರು ಬೇಸರ ವ್ಯಕ್ತಪಡಿದ್ದಾರೆ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷದಿಂದ ಬೇಸತ್ತ ಜನರು, ಇಂದು ತಾವೇ ಸ್ಮಶಾನ ಜಾಗಕ್ಕೆ ಬೇಲಿ ಹಾಕಿದ್ದಾರೆ. ಗ್ರಾಮದಲ್ಲಿ 60 ಮನೆಯಿದ್ದು, ಗ್ರಾಮಸ್ಥರೇ ಹಣವನ್ನ ಹಾಕಿಕೊಂಡು ಬೇಲಿ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇನ್ನೂ ಇದೆ ವೇಳೆ ಮಾತನಾಡಿದ ಗ್ರಾಮಸ್ಥರು, ಲಿಂಗಾಯತ ಸಮುದಾಯದಿಂದ ಮಾದಿಗ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ರೀತಿಯಲ್ಲಿ ಸ್ಮಶಾನವನ್ನ ನಮಗೆ ಮಾಡಿಕೊಟ್ಟಿಲ್ಲ ಅಂದ್ರೆ ಡಿಸಿ ಕಚೇರಿ, ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.
