ಬೆಂಗಳೂರು: ಸಿಎಂ ಬದಲಾವಣೆ ವಿಚಾರ ಒಂದು ಪ್ರಹಸನ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಈ ಪ್ರಹಸನದಿಂದ ನಾಗರಿಕರಿಗೆ ಪುಕ್ಕಟೆ ಮನರಂಜನೆ ಲಭಿಸುತ್ತಿದೆ. ಈ ಮನರಂಜನೆಯ ಪ್ರಹಸನ ಕೊನೆಗಾಣಿಸಿ ಎಂದು ಆಗ್ರಹಿಸಿದರು. ಒಪ್ಪಂದ ಇದೆ; ಒಪ್ಪಂದ ಇಲ್ಲ; ನಾನೇ ಐದು ವರ್ಷ ಸಿಎಂ- ಇದೆಲ್ಲ ಒಂದು ಪ್ರಹಸನ ಎಂದು ತಿಳಿಸಿದರು. ಇದನ್ನು ಪರಿಹರಿಸಲಾಗದ ನಾಯಕತ್ವ ನಿಜವಾದ ಅಸಮರ್ಥ ನಾಯಕತ್ವ ಎಂದರು.
ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭಕ್ಕೆ ಇನ್ನು ಏಳು ದಿನ ಇದೆ. ಜನರೂ ಆಕಾಂಕ್ಷೆಯಿಂದ ಈ ಅಧಿವೇಶನವನ್ನು ಎದುರು ನೋಡುತ್ತಿದ್ದಾರೆ. ಬ್ರೇಕ್ ಫಾಸ್ಟ್ ನಡೆದಿದೆ. ಬ್ರೇಕ್ ಫಾಸ್ಟ್ ಆದಮೇಲೆ ಡಿನ್ನರಾ.. ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇದೆಲ್ಲ ಮಾಡುತ್ತ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ತಮ್ಮ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಇವರು ಬಿಜೆಪಿ, ವಿಪಕ್ಷದ ಸಾಮಥ್ರ್ಯವನ್ನು ಇವರು ಅಳೆಯಲು ಹೊರಟಿದ್ದಾರೆ ಎಂದು ದೂರಿದರು. ಅಧಿವೇಶನದಲ್ಲಿ ಬಿಜೆಪಿ- ಜೆಡಿಎಸ್ ಜಂಟಿಯಾಗಿ ಯಾವ್ಯಾವ ಪ್ರಮುಖ ವಿಚಾರ ಕೈಗೆತ್ತಿಕೊಳ್ಳಬೇಕೆಂದು ನಿರ್ಧರಿಸಿದ್ದೇವೆ ಎಂದರು. ಜನರಿಗೆ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ. ಕಾದಾಟ, ಮೇಲಾಟದ ಕುರಿತು ಜನರಿಗೆ ಆಸಕ್ತಿ ಇಲ್ಲ ಎಂದು ತಿಳಿಸಿದರು.
