ಚಿಕ್ಕಮಗಳೂರು: ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕ್ಯಾಥೋಲಿಕ್ ಕೊಂಕಣಿ ರಾಕಣ್ ಸಂಚಾಲನ ಇವರ ಸಹಯೋಗದಲ್ಲಿ ಬೃಹತ್ ‘ಕೊಂಕಣಿ ಕಲೋತ್ಸವ-2025’ ಕಾರ್ಯಕ್ರಮವನ್ನು ಇದೆ ಡಿಸೆಂಬರ್ 14ರಂದು ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಅವರು ಕೊಂಕಣಿ ಭಾಷಾ ಸಮುದಾಯದ ಜನರನ್ನು ಒಗ್ಗೂಡಿಸುವ ಮತ್ತು ಕೊಂಕಣಿ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು
ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಸ್ಪರ್ಧಿಗಳಿಗೆ ವಿವಿಧ ವಿನೋದಾವಳಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು. ಈ ಸ್ಪರ್ಧೆಗಳ ವಿಜೇತರಿಗೆ ಆಕರ್ಷಕ ಬಹುಮಾನ ಟ್ರೋಫಿ, ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಎಂದರು.
ಅಂದು ಮಧ್ಯಾಹ್ನ 3.00 ಗಂಟೆಗೆ ಕುವೆಂಪು ಕಲಾಮಂದಿರದಿಂದ ಬೃಹತ್ ಸಾಂಸ್ಕೃತಿಕ ಮೆರವಣಿಗೆಯು ನಡೆಯಲಿದ್ದು, ಇದರಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಲಿವೆ. ಮೆರವಣಿಗೆಯು ಐ.ಜಿ. ರಸ್ತೆಯ ಮೂಲಕ ಸಾಗಿ ಹನುಮಂತಪ್ಪ ಸರ್ಕಲ್ನಿಂದ ಎಂ.ಜಿ. ರಸ್ತೆಯ ಮುಖಾಂತರ ಮತ್ತೆ ಕುವೆಂಪು ಕಲಾಮಂದಿರಕ್ಕೆ ತಲುಪಿ. ಸಂಜೆ 4.00 ಗಂಟೆಗೆ ಕಲಾತಂಡಗಳ ಪ್ರದರ್ಶನದೊಂದಿಗೆ ವೇದಿಕೆ ಕಾರ್ಯಕ್ರಮವು ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದರು
