ಹುಬ್ಬಳ್ಳಿ: ಇಂಡಿಗೋ ವಿಮಾನಯಾನದಲ್ಲಿ ಸತತ ನಾಲ್ಕನೇ ದಿನವೂ ಬಿಕ್ಕಟ್ಟು ಮುಂದುವರೆದಿದೆ. ಪರಿಣಾಮವಾಗಿ, ನವಜೋಡಿಗಳು ಸಮಯಕ್ಕೆ ಸರಿಯಾಗಿ ಹುಬ್ಬಳ್ಳಿ ತಲುಪಲು ಸಾಧ್ಯವಾಗದೆ ಆನ್ಲೈನ್ ಮೂಲಕ ಅರತಕ್ಷತೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯ ಮೇಘಾ ಕ್ಷೀರಸಾಗರ್ ಮತ್ತು ಭುವನೇಶ್ವರದ ಸಂಗಮ್ ದಾಸ್ ಅವರು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ 23 ರಂದು ಒಡಿಶಾದ ಭುವನೇಶ್ವರದಲ್ಲಿ ಇವರ ವಿವಾಹ ನಡೆಸಲಾಗಿತ್ತು. ನಂತರ ಡಿಸೆಂಬರ್ 3 ರಂದು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮೇಘಾ ಅವರ ತಂದೆ ಆಯೋಜಿಸಿದ್ದರು. ಹುಬ್ಬಳ್ಳಿಯ ಗುಜರಾತ್ ಭವನ ಸಕಲ ರೀತಿಯಲ್ಲಿ ಸಿದ್ಧಗೊಂಡಿತ್ತು; ಬಂಧು-ಬಾಂಧವರು ಕಾತರದಿಂದ ಕಾಯುತ್ತಿದ್ದರು. ಆದರೆ ಫ್ಲೈಟ್ ರದ್ದುಪಡುತ್ತಿದ್ದಂತೆ, ವಧು-ವರರಿಗೆ ಹುಬ್ಬಳ್ಳಿ ತಲುಪಲು ಸಾಧ್ಯವಾಗಲಿಲ್ಲ.
ಡಿಸೆಂಬರ್ 2 ರಂದು ಭುವನೇಶ್ವರದಿಂದ ಬೆಂಗಳೂರು ಮೂಲಕ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲು ದಂಪತಿ ಸಿದ್ಧರಾಗಿದ್ದರು. ಆದರೆ ರಾತ್ರಿಯಿಡೀ ವಿಮಾನ ವಿಳಂಬವಾಗುತ್ತಿದ್ದಂತೆ, ಡಿಸೆಂಬರ್ 3ರ ಮುಂಜಾವಿನಲ್ಲಿ ಇಂಡಿಗೋ ವಿಮಾನ ರದ್ದು ಆಗಿರುವ ಮಾಹಿತಿ ಸಿಕ್ಕಿದೆ. ಸುಮಾರು 1,400 ಕಿಲೋಮೀಟರ್ ದೂರದಲ್ಲಿದ್ದ ಇವರಿಗೆ ಯಾವುದೇ ಪರ್ಯಾಯ ಮಾರ್ಗವೂ ಸಿಗಲಿಲ್ಲ. ನಿಗದಿತ ದಿನಕ್ಕೆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಅಸಾಧ್ಯವಾಗಿದೆ.
ಇತ್ತ, ಹುಬ್ಬಳ್ಳಿಯಲ್ಲಿ ಈಗಾಗಲೇ ನೂರಾರು ಅತಿಥಿಗಳು, ರಿಸೆಪ್ಷನ್ ಡೆಕೋರೇಷನ್, ಊಟದ ವ್ಯವಸ್ಥೆ ಎಲ್ಲವೂ ಸಿದ್ಧವಾಗಿತ್ತು. ಕೊನೆಯ ಕ್ಷಣದಲ್ಲಿ ಸಮಾರಂಭವನ್ನು ರದ್ದು ಮಾಡುವುದು ಕುಟುಂಬಕ್ಕೆ ಇಷ್ಟವಾಗಲಿಲ್ಲ. ಆದ್ದರಿಂದ ಮನೆಯವರು ಸೇರಿ ಡಿಜಿಟಲ್ ಮೂಲಕ ಅರತಕ್ಷತೆ ನಡೆಸಲು ನಿರ್ಧರಿಸಿದರು. ವಧು-ವರ ಕೂರವ ಜಾಗದಲ್ಲಿ ಮೇಘಾ ಅವರ ಪೋಷಕರು ಕುಳಿತು ಅತಿಥಿಗಳನ್ನು ಸತ್ಕರಿಸಿದರು. ಮಂಟಪದ ಪಕ್ಕದಲ್ಲಿದ್ದ ದೊಡ್ಡ ಪರದೆಯಲ್ಲಿ ಒಡಿಶಾದಲ್ಲಿ ಸಿಲುಕಿದ್ದ ಮೇಘಾ ಮತ್ತು ಸಂಗಮ್ ಅವರು ಲೈವ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅತಿಥಿಗಳಿಗೆ ಧನ್ಯವಾದ ತಿಳಿಸಿದರು. ಬಂಧು-ಮಿತ್ರರು ವೇದಿಕೆಯಲ್ಲಿ ಪೋಷಕರಿಗೆ ಶುಭಕೋರುತ್ತಿದ್ದರೆ, ನವಜೋಡಿಗಳು ಪರದೆಯ ಮೂಲಕ ಎಲ್ಲರಿಗೂ ವಂದನೆ ಸಲ್ಲಿಸಿ ಸಂವಾದ ನಡೆಸಿದರು.
ಈ ವಿಶಿಷ್ಟ ಘಟನೆ ಇಂಡಿಗೋ ಏರ್ಲೈನ್ಸ್ನ ಲೋಪದಿಂದ ಹುಟ್ಟಿಕೊಂಡದ್ದಾದರೂ, ತಂತ್ರಜ್ಞಾನದ ನೆರವಿನಿಂದ ಈ ಮದುವೆ ಅರತಕ್ಷತೆ ವಿಶೇಷ ಮದುವೆಗಳ ಪಟ್ಟಿಗೆ ಸೇರಿಕೊಂಡಿದೆ.
