ಜಯಪುರ : ನಾಡಪ್ರಭು ಕೆಂಪೇಗೌಡರು ಉತ್ತಮ ಆಡಳಿತಗಾರ ಮಾತ್ರವಲ್ಲ, ಈ ದೇಶ ಕಂಡ ಅತ್ಯುತ್ತಮ ಇಂಜಿನಿಯರ್, ಉತ್ತಮ ನೀರಾವರಿ ತಜ್ಞ, ಉತ್ತಮ ಮಾರುಕಟ್ಟೆ ತಜ್ಞ ಹಾಗೂ ಉತ್ತಮ ಸಾಮಾಜಿಕ ಸುಧಾರಾಕಾರಗಿದ್ದರು. ಆ ಕಾರಣದಿಂದಾಗಿ ಬೆಂಗಳೂರಿನಂಥ ವ್ಯವಸ್ಥಿತ ನಗರವನ್ನು ಕಟ್ಟಲು ಸಾಧ್ಯವಾಯಿತು ಎಂದು ಯುವ ಒಕ್ಕಲಿಗ ವೇದಿಕೆಯ ಗೌರವಾಧ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಹೇಳಿದರು.

ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೂಬ್ಳದಲ್ಲಿ ಹೇರೂರು ಯುವ ಒಕ್ಕಲಿಗ ವೇದಿಕೆಯ ನೇತೃತ್ವದಲ್ಲಿ ನಡೆದ ನಾಡ ಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಾವರಿಗೆ ಕೆರೆಗಳು, ವ್ಯಾಪಾರಕ್ಕೆ ಮಾರುಕಟ್ಟೆಗಳು, ಆಸ್ತಿಕರಿಗಾಗಿ ದೇವಸ್ಥಾನಗಳನ್ನು ಅಯಕಟ್ಟಿನ ಜಾಗಗಳಲ್ಲಿ ನಿರ್ಮಾಣ ಮಾಡಿದ್ದ ಅವರು, ಸಮಾಜದ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು, ಕೆಂಪೇಗೌಡರ ಆದರ್ಶ ಗಳನ್ನು ಯುವ ಸಮುದಾಯ ಅಳವಡಿಸಿಕೊಂಡು ಪರೋಪಕಾರ ಹಾಗೂ ಸಮಾಜಮುಖಿ ಚಿಂತನೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಕಾರ್ಯದರ್ಶಿ ವರುಣ್ ಬಿ ಎಲ್ ಮಾತನಾಡಿ, ಒಂದು ಉತ್ತಮ ನಗರದ ನಿರ್ಮಾಣದ ಮನೋಭಿಲಾಷೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಂತಹ ಕೆಂಪೇಗೌಡರು, ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದರು, ಕೇವಲ ತನ್ನ ಜನಾಂಗದ ವ್ಯಕ್ತಿಗಳ ಅಭಿವೃದ್ಧಿಗಾಗಿ ಮಾತ್ರವಲ್ಲದೆ ಬೇರೆ ಸಮುದಾಯದ ಜನರನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ತುಂಬಾ ಮುಂದಾಲೋಚನೆಯ ಹಾಗೂ ದೂರ ದೃಷ್ಟಿಯಿಂದ ನಗರ ನಿರ್ಮಾಣ ಕಾರ್ಯವನ್ನು ಕೈಗೊಂಡರು. ವ್ಯಾಪಾರ ಹಾಗೂ ವ್ಯವಹಾರಿಕ ದೃಷ್ಟಿಯಿಂದ ಗಲ್ಲಿ ಗಲ್ಲಿಗಳಲ್ಲಿ ಪೇಟೆಗಳ ನಿರ್ಮಿಸಿ ಕುಲಕಸಬುಗಳ ಹಾಗೂ ನಗರದ ಅಭಿವೃದ್ಧಿಯ ಸಲುವಾಗಿ ಪೇಟೆಗಳ ಅಭಿವೃದ್ಧಿಗೆ ಶ್ರಮಿಸಿದರು. ಸಾಂಸ್ಕೃತಿಕ ದೃಷ್ಟಿಯ ಹಿನ್ನೆಲೆಯಿಂದ ಗುಡಿ ಗೋಪುರಗಳನ್ನು ನಿರ್ಮಿಸಿ ಸಾಂಸ್ಕೃತಿಕ ಕ್ಷೇತ್ರಕ್ಕೂ ಸಹ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ನಮ್ಮ ರಾಜ್ಯಕ್ಕೆ ಕೆಂಪೇಗೌಡರ ಕಾಣಿಕೆ ಮಹತ್ತರ ವಾದುದಾಗಿದೆ ಎಂದರು.

ಮುಖಂಡರಾದ ಕುಕ್ಕುಡಿಗೆ ರವೀಂದ್ರ ಮಾತನಾಡಿ, ಕೆಂಪೇಗೌಡರ ಜಯಂತಿಯ ಆಚರಣೆಯ ಜೊತೆಗೆ, ಯುವ ಒಕ್ಕಲಿಗ ವೇದಿಕೆ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಹಾಗೂ ಆಸ್ಪತ್ರೆಗೆ ಅಗತ್ಯ ವಸ್ತು ನೀಡುವ ಕಾರ್ಯ ಕೈಗೊಂಡಿರುವುದು ಅಭಿನಂದನರ್ಹ ಸಂಗತಿಯಾಗಿದೆ . ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸುವ ಜೊತೆಗೆ ಅವರ ಆದರ್ಶಗಳನ್ನು ಯುವ ಜನತೆ ಮೈಗುಡಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ನಂತರ ಜಯಪುರದ ಸರ್ಕಾರಿ ಆಸ್ಪತ್ರೆಗೆ ಗಡಿಯಾರ ಹಾಗೂ ಬಿಪಿ ತಪಾಸಣೆ ಯಂತ್ರವನ್ನು ಹಾಗೂ ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣು ವಿತರಿಸಲಾಯಿತು ಮತ್ತು ಜಯಪುರ ಸರ್ಕಾರಿ ಬಾಲಕರ ವಸತಿ ನಿಲಯಕ್ಕೆ ಗಡಿಯಾರ ಹಾಗೂ ವಿದ್ಯಾರ್ಥಿಗಳಿಗೆ ಟೋಪಿ ಹಾಗೂ ಚಾಪೆಗಳನ್ನು ವಿತರಿಸಲಾಯಿತು. ಜಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿಯನ್ನು ಕೆಂಪೇಗೌಡರ ಜಯಂತಿಯ ಅಂಗವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೇರೂರು ಯುವ ಒಕ್ಕಲಿಗ ವೇದಿಕೆಯ ಅಧ್ಯಕ್ಷ ವಿಜೇಂದ್ರ ನಿಡವಾನೆ, ಖಜಾಂಚಿ ನಿರೀಕ್ಷಿತ್ ಎಸ್, ಸಂಚಾಲಕರುಗಳಾದ ನಾಗರಾಜ್, ರಕ್ಷಿತ್ ಹೇರೂರು ಹಾಗೂ ಸಂಘದ ಪದಾಧಿಕಾರಿಗಳು, ಪರಿವಾರದ ಹಿರಿಯ ಮುಖಂಡರು ಊರಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
