ನವದೆಹಲಿ: ಭಾರತ ಮತ್ತು ರಷ್ಯಾ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಜೊತೆಯಾಗಿ ಸಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi ) ಅವರು ಶುಕ್ರವಾರ ಮಧ್ಯಾಹ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ( Russian President Vladimir Putin) ಅವರೊಂದಿಗೆ ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಎಂಟು ದಶಕಗಳಲ್ಲಿ ಜಗತ್ತು ಹಲವು ಏರಿಳಿತಗಳನ್ನು ಕಂಡಿದೆ. ಇಷ್ಟೆಲ್ಲ ಸವಾಲುಗಳು ಮತ್ತು ಬಿಕ್ಕಟ್ಟುಗಳ ನಡುವೆಯೂ ಭಾರತ-ರಷ್ಯಾ ಸ್ನೇಹ ಅಚಲವಾಗಿ ಉಳಿದಿದೆ. ಪರಸ್ಪರ ಗೌರವ ಮತ್ತು ವಿಶ್ವಾಸದಲ್ಲಿ ಬೇರೂರಿರುವ ಈ ಸಂಬಂಧವು ಕಾಲದ ಪರೀಕ್ಷೆಯಲ್ಲಿ ಗೆದ್ದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಯೋತ್ಪಾದನೆ ವಿರುದ್ಧ ಅಚಲ ಬೆಂಬಲ
ಭಯೋತ್ಪಾದನೆಯನ್ನು ಎದುರಿಸುವ ಭಾರತದ ಪ್ರಯತ್ನಗಳಿಗೆ ಮಾಸ್ಕೋ ಬಲವಾದ ಬೆಂಬಲ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿಗೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammed) ಕಾರಣ ಎಂದು ತಿಳಿದ ನಂತರ ರಷ್ಯಾ ತೀವ್ರವಾಗಿ ಪ್ರತಿಕ್ರಿಯಿಸಿತ್ತು. ರಷ್ಯಾ ಈ ದಾಳಿಯನ್ನು ಖಂಡಿಸಿ, “ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಭಾರತದೊಂದಿಗೆ ಕೈಜೋಡಿಸುವುದಾಗಿ” ಹೇಳಿತ್ತು. ಪಾಕಿಸ್ತಾನದಲ್ಲಿರುವ ಮತ್ತು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗಗಳಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿದ್ದ ಭಾರತದ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ಗೂ ರಷ್ಯಾ ಬೆಂಬಲ ನೀಡಿತ್ತು ಎಂದು ಹೇಳಿದರು.
ಭಾರತಕ್ಕೆ ತೈಲ ಪೂರೈಕೆ ಮುಂದುವರೆಸುತ್ತೇವೆ — ಪುಟಿನ್
ಮೋದಿ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಭಾರತ ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸುವಂತೆ ಅಮೆರಿಕಾದಿಂದ ಒತ್ತಡ ಎದುರಿಸುತ್ತಿದ್ದರೂ, ಭಾರತಕ್ಕೆ ತೈಲ ಪೂರೈಕೆಯನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದರು. ಇಂಧನ ಭದ್ರತೆಯು ಭಾರತ-ರಷ್ಯಾ ಪಾಲುದಾರಿಕೆಯ ಬಲವಾದ ಮತ್ತು ಪ್ರಮುಖ ಆಧಾರಸ್ತಂಭವಾಗಿದೆ ಎಂದು ಪ್ರಧಾನಿ ಮೋದಿಯವರು ಪುಟಿನ್ ಅವರಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ ನಾಗರಿಕ ಪರಮಾಣು ಮತ್ತು ಸ್ವಚ್ಛ ಇಂಧನ ಕ್ಷೇತ್ರದಲ್ಲಿ ದಶಕಗಳ ಸಹಕಾರವನ್ನು ಮುಂದುವರಿಸುವುದಾಗಿ ಹೇಳಿದರು.
ಇದರ ಜೊತೆಗೆ ಉಭಯ ದೇಶಗಳು ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್ಗಳಿಗೆ (USD 100 Billion) ಹೆಚ್ಚಿಸುವ ಗುರಿಯನ್ನು ಹೊಂದಿವೆ ಎಂದು ಪುಟಿನ್ ಹೇಳಿದರು. ಎರಡೂ ದೇಶಗಳು ದ್ವಿಪಕ್ಷೀಯ ಪಾವತಿಗಳಿಗಾಗಿ ರಾಷ್ಟ್ರೀಯ ಕರೆನ್ಸಿಗಳನ್ನು ಬಳಸುವತ್ತ ಸಾಗುತ್ತಿವೆ ಎಂದು ಪುಟಿನ್ ಅಭಿಪ್ರಾಯಪಟ್ಟಿದ್ದು, ಇದು ಅಮೆರಿಕನ್ ಡಾಲರ್ಗೆ ಜಾಗತಿಕ ಪರ್ಯಾಯವನ್ನು ಉತ್ತೇಜಿಸುವ BRICS ರಾಷ್ಟ್ರಗಳ ಊಹಾಪೋಹಗಳ ನಡುವೆ ಗಮನ ಸೆಳೆದಿದೆ. ಉದ್ಯೋಗ, ಆರೋಗ್ಯ, ಹಡಗು ಮತ್ತು ರಾಸಾಯನಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವಾರು ಒಪ್ಪಂದಗಳಿಗೆ ಎರಡೂ ದೇಶಗಳ ಅಧಿಕಾರಿಗಳು ಸಹಿ ಹಾಕಿ ವಿನಿಮಯ ಮಾಡಿಕೊಂಡರು.
“ರಷ್ಯಾ ನಿಯೋಗಕ್ಕೆ ಆತ್ಮೀಯ ಮತ್ತು ಆತಿಥ್ಯದ ಸ್ವಾಗತಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿ ಹಾಗೂ ಭಾರತದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಭೋಜನಕೂಟದಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ನನ್ನ ಮಾತುಕತೆಗಳು ನಮ್ಮ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಬಹಳ ಸಹಾಯಕವಾಗಿದ್ದವು,” ಎಂದು ಪುಟಿನ್ ಹೇಳಿದರು.
