ಚಿಕ್ಕಮಗಳೂರು : ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರನ್ನು ಚಿಕ್ಕಮಗಳೂರು ನಗರ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕುರಿಚಿಕ್ಕನಹಳ್ಳಿಯ ನಿಂಗೇಗೌಡ (60) ಎಂಬ ರೈತರು ತಾವು ಕಷ್ಟಪಟ್ಟು ಬೆಳೆದಿದ್ದ ಆಲೂಗಡ್ಡೆ ಮತ್ತು ಬೀನ್ಸ್ ಅನ್ನು ಎಪಿಎಂಸಿಯಲ್ಲಿ ಮಾರಿ ಬಂದ 50,000 ರೂಪಾಯಿ ನಗದಿನೊಂದಿಗೆ ಊರಿಗೆ ಮರಳಲು ಫೆಬ್ರವರಿ 16ರ ಬೆಳಿಗ್ಗೆ ಎಐಟಿ ಸರ್ಕಲ್ ಬಳಿ ಬಸ್ಗಾಗಿ ಕಾಯುತ್ತಿದ್ದರು.
*https://whatsapp.com/channel/0029VaAUBknChq6Ibwwvi12W*
*PUBLIC IMPACT CHANNEL’ನ ಪ್ರತಿಯೊಂದು ಸುದ್ದಿಗಳು ಇಲ್ಲಿ ಸಿಗುತ್ತದೆ. ಮೇಲಿನ ಲಿಂಕ್ ಮೂಲಕ ಜಾಯಿನ್ ಆಗಿ*
ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು, “ನಾವು ಸಖರಾಯಪಟ್ಟಣದ ಕಡೆಗೇ ಹೋಗುತ್ತಿದ್ದೇವೆ. ಬನ್ನಿ ನಿಮ್ಮ ಊರಿಗೆ ಬಿಡುತ್ತೇವೆ” ಎಂದು ನಂಬಿಸಿ ವೃದ್ಧರನ್ನು ಬೈಕ್ ಹತ್ತಿಸಿಕೊಂಡಿದ್ದಾರೆ. ಆದರೆ ಕಣಿವೆ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ರೈತನ ಬಾಯಿ ಮುಚ್ಚಿ, ಎದೆ ಹಾಗೂ ಮುಖಕ್ಕೆ ಮನಸೋಇಚ್ಛೆ ಹಲ್ಲೆ ನಡೆಸಿ ಅವರ ಬಳಿಯಿದ್ದ ಸಂಪೂರ್ಣ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಘಟನೆ ನಡೆದ ತಕ್ಷಣ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ನಗರ ಪೊಲೀಸ್ ನಿರೀಕ್ಷಕ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದ ತಂಡವು ವೈಜ್ಞಾನಿಕ ಮತ್ತು ತಾಂತ್ರಿಕ ತನಿಖೆ ನಡೆಸಿ, ತುಮಕೂರು ಜಿಲ್ಲೆಯ ತುರುವೇಕೆರೆ ಮೂಲದ ಧನಪಾಲ (18) ಹಾಗೂ ಒಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸಿದೆ.
ಬಂಧಿತರಿಂದ ದೋಚಲಾದ ಹಣದಲ್ಲಿ 29,500 ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಅತ್ಯಂತ ವೇಗವಾಗಿ ಭೇದಿಸಿದ ಪೊಲೀಸ್ ತಂಡದ ಕಾರ್ಯವೈಖರಿಯನ್ನು ಎಸ್ಪಿ ಶ್ಲಾಘಿಸಿದ್ದು, ಬಹುಮಾನ ಘೋಷಿಸಿದ್ದಾರೆ.

ಕಷ್ಟಪಟ್ಟು ಬೆಳೆದ ಫಸಲಿನ ಹಣವನ್ನು ದೋಚಿದ ಕಿರಾತಕರು ಈಗ ಕಾನೂನಿನ ಸುಳಿಗೆ ಸಿಲುಕಿದ್ದು, ಸಾರ್ವಜನಿಕರು ಅಪರಿಚಿತರ ವಾಹನ ಹತ್ತುವ ಮುನ್ನ ಇಂತಹ ಘಟನೆಗಳು ಎಚ್ಚರಿಕೆಯ ಘಂಟೆಯಾಗಿದೆ.
