ಅರಣ್ಯ ಇಲಾಖೆಯ ಕಣ್ಣಿಗೆ ಬೀಳದ ಕಾಡಾನೆಗಳು ಜನಸಾಮಾನ್ಯರ, ರೈತರ ಕಣ್ಣಿಗೆ ಬೀಳುತ್ತಿದೆ. ಈ ಹಿಂದೆ ಕಾಡಲ್ಲೇ ಬೀಡು ಬಿಡುತ್ತಿದ್ದ ಕಾಡಾನೆಗಳು ಇದೀಗ ಸಿಟಿ ರೌಂಡ್ಸ್, ಹಳ್ಳಿ ರೌಂಡ್ಸ್ ಹೊಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ದೃಶ್ಯದಲ್ಲಿ ಕೂಡ ಎರಡು ಕಾಡಾನೆಗಳು ನಿರ್ಭೀತಿಯಿಂದ ಹಳ್ಳಿಯ ಮನೆ ಒಂದರ ಮುಂಭಾಗ ನಡೆದುಕೊಂಡು ಹೋಗುತ್ತಿರುವುದನ್ನ ನೋಡಬಹುದು.
ಚಿಕ್ಕಮಗಳೂರು ನಗರದಿಂದ ಅನತಿ ದೂರದಲ್ಲಿರುವ ಇಂದಾವರ ಗ್ರಾಮದ ರೈತರೊಬ್ಬರ ಮನೆ ಎದುರು ಎರಡು ಸಲಗಗಳು ನಡೆದುಕೊಂಡು ಹೋಗಿರುವ ದೃಶ್ಯ ಜನರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಕನಿಷ್ಠ ಕಾಡಾನೆಗಳ ಚಲನ ವಲನದ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ರೈತರು, ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕಾಡಾನೆ ದಾಳಿಯಿಂದ ಕಾಫಿ ನಾಡಿನಲ್ಲಿ ಸರಣಿ ಸಾವುಗಳು ಸಂಭವಿಸುತ್ತಿದೆ. ಇನ್ನೆಷ್ಟು ಅಮಾಯಕರು ಬಲಿಯಾಗಬೇಕು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಏಳಿ, ಎದ್ದೇಳಿ ಅರಣ್ಯ ಇಲಾಖೆಯ ಅಧಿಕಾರಿಗಳೇ… ಸಿಬ್ಬಂದಿಗಳೇ.. ಅಂತಾ ಎಚ್ಚರಿಸುವ ಕೆಲಸವನ್ನು ಜನರು ಮಾಡುತ್ತಿದ್ದಾರೆ.
