ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಬೋರಮ್ಮ ಮೃತಪಟ್ಟ ಬಳಿಕ ಉಂಟಾದ ಪ್ರತಿಭಟನಾ ಪ್ರಕರಣದಲ್ಲಿ ಒಟ್ಟು 18 ಮಂದಿ ರೈತರ ಮೇಲೆ ಎಫ್ ಐ ಆರ್ ದಾಖಲಿಸಿದ ಪೊಲೀಸರು ಅದರಲ್ಲಿ 9 ಜನ ರೈತ ಹೋರಾಟಗಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಹಾಗೂ ಬಂಧನ ಮಾಡಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಹೌದು .. ಫೆಬ್ರವರಿ 22ರಂದು ಬಾಳೆಹೊನ್ನೂರು ಸಮೀಪದ ಹ್ಯಾರಂಬಿಪುರದಲ್ಲಿ ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಬೋರಮ್ಮ ಸಾವನ್ನಪ್ಪಿದ್ದರು ಈ ವೇಳೆ ಶವವನ್ನು ಕಡಬಗೆರೆಯಲ್ಲಿ ತಡೆದು, ಪರಿಹಾರ ಹಾಗೂ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಬೆಳಗ್ಗಿನಿಂದ ಸಂಜೆವರೆಗೂ ನಡೆದ ಈ ಪ್ರತಿಭಟನೆ ವೇಳೆ ಹೆದ್ದಾರಿ ಬಂದ್, ಶವ ಸಾಗಣೆಗೆ ಅಡ್ಡಿ, ಪೊಲೀಸರ ಮೇಲೆ ಕಲ್ಲು ತೂರಾಟ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಾಳೆಹೊನ್ನೂರು ಠಾಣೆಯಲ್ಲಿ ಒಟ್ಟು 18 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಆ ನಂತರ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ರೈತರು ಮತ್ತು ಕಾಫಿ ಬೆಳೆಗಾರರೊಂದಿಗೆ ಸಭೆ ನಡೆಸಿ, ರೈತರ ಮೇಲಿನ ಕೇಸ್ಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದರು. ಆದರೆ, ಸಭೆ ನಡೆಸಿ ಹೋದ ಬಳಿಕ ಎಫ್ ಐ ಆರ್ ಗೆ 9 ಜನರನ್ನು ಹೆಚ್ಚುವರಿ ಸೇರ್ಪಡೆ ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ಇದೀಗ ಯಾವುದೇ ಕ್ರಮ ಕೈಗೊಳ್ಳಬಾರದು ಹಾಗೂ ಬಂಧನ ಮಾಡಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಾಂಗ ಹೋರಾಟದಲ್ಲಿ ರೈತರಿಗೆ ತಾತ್ಕಾಲಿಕವಾಗಿ ಜಯ ಸಿಕ್ಕಿದ್ದು ಈಗ ಸತ್ಯ ಮೇವ ಜಯತೇ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ರೈತರ ಮೇಲೆ ಲಾಠಿಚಾರ್ಜ್ ಮಾಡಿ ಕೇಸ್ ಹಾಕಿದ ಖಾಕಿಗೆ ಮುಖಭಂಗವಾಗಿದೆ.
ಹಿರಿಯ ವಕೀಲ ಅರುಣ್ ಶ್ಯಾಮ್ ರೈತರ ಪರವಾಗಿ ವಾದ ಮಂಡಿಸಿದ್ದರು.
