ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕೇವಲ ಚುನಾವಣಾ ಗಿಮಿಕ್ ಆಗಿದ್ದು, ರಾಜ್ಯದ ಯುವಜನತೆಯ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಸಂತೋಷ್ ಕೊಟ್ಯಾನ್ ತೀವ್ರವಾಗಿ ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ಬಜೆಟ್ ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು ಯುವಜನತೆಗೆ ನಿರಾಸೆ ತಂದ ‘ಶೂನ್ಯ’ ಬಜೆಟ್ ಎಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದೆ.

ಯುವಜನತೆಗೆ ವಂಚನೆ:
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದರೂ, ಹೊಸ ಉದ್ಯೋಗ ಸೃಷ್ಟಿಯ ಬಗ್ಗೆ ಬಜೆಟ್ನಲ್ಲಿ ಯಾವುದೇ ಸ್ಪಷ್ಟವಾದ ದಿಕ್ಸೂಚಿ ಇಲ್ಲ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯುವಜನಸ್ನೇಹಿ ಯೋಜನೆಗಳಿಗೆ ಈ ಸರ್ಕಾರ ಎಳ್ಳು-ನೀರು ಬಿಟ್ಟಿದೆ.
ಅಭಿವೃದ್ಧಿ ಕುಂಠಿತ:
ಕೇವಲ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುತ್ತಿರುವ ಸರ್ಕಾರ, ಮೂಲಸೌಕರ್ಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದೆ.
ನಮ್ಮ ಜಿಲ್ಲೆಯ ನೀರಾವರಿ, ರಸ್ತೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನ ಮೀಸಲಿಡದಿರುವುದು ಖಂಡನೀಯ.
ಸಾಲದ ಸುಳಿಯಲ್ಲಿ ರಾಜ್ಯ:
ಅಭಿವೃದ್ಧಿ ಶೂನ್ಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು, ರಾಜ್ಯವನ್ನು ಸಾಲದ ಸುಳಿಗೆ ದೂಡುತ್ತಿದ್ದಾರೆ.
ಇದು ಮುಂದಿನ ಪೀಳಿಗೆಯ ಮೇಲೆ ದೊಡ್ಡ ಆರ್ಥಿಕ ಹೊರೆಯಾಗಲಿದೆ.
”ಈ ಬಜೆಟ್ನಲ್ಲಿ ರೈತರಿಗೆ ಆಶಾದಾಯಕ ಯೋಜನೆಗಳಿಲ್ಲ, ಯುವಕರಿಗೆ ಉದ್ಯೋಗದ ಭರವಸೆ ಇಲ್ಲ. ಇದು ಕೇವಲ ‘ಅನ್ನಭಾಗ್ಯ’ದ ಹೆಸರಿನಲ್ಲಿ ಯುವಕರ ‘ಭವಿಷ್ಯ ಭಾಗ್ಯ’ವನ್ನು ಕಸಿದುಕೊಳ್ಳುವ ಬಜೆಟ್ ಆಗಿದೆ.” ಎಂದು ಸಂತೋಷ್ ಕೊಟ್ಯಾನ್ ಕಿಡಿಕಾರಿದ್ದಾರೆ.
ಬಜೆಟ್ನಲ್ಲಿ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಮತ್ತು ಯುವಜನತೆಯ ಹಕ್ಕುಗಳಿಗಾಗಿ ಮುಂಬರುವ ದಿನಗಳಲ್ಲಿ ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೊಟ್ಯಾನ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
