ಎನ್. ಆರ್. ಪುರ: ತಾಲೂಕಿನಲ್ಲಿ ಕಾಡಾನೆಗಳ ಉಪಟಳ ತಡೆಗಟ್ಟುವ ಉದ್ದೇಶದಿಂದ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣ ಆರಂಭಿಸಿರುವ ಕಾಮಗಾರಿ ಕಳಪೆಯಿಂದ ಕೂಡಿದ್ದು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೌದು .. ಗ್ರಾಮಸ್ಥರ ತೋಟ ಇರುವ ಪ್ರದೇಶಗಳಲ್ಲಿ 20 ರಿಂದ 25 ಅಡಿ ಜಾಗವನ್ನು ಸ್ವಚ್ಛಗೊಳಿಸಿ ಬೇಲಿ ನಿರ್ಮಾಣಕ್ಕೆ ಸಿದ್ಧಪಡಿಸಿರುವುದಾದರೂ, ಅರಣ್ಯ ಪ್ರದೇಶದಲ್ಲಿ ಕೇವಲ 10 ರಿಂದ 15 ಅಡಿ ಮಾತ್ರ ಸ್ವಚ್ಛಗೊಳಿಸಲಾಗಿದೆ. ಜೊತೆಗೆ ಮರದ ಕೊಂಬೆಗಳನ್ನು ಸಮರ್ಪಕವಾಗಿ ತೆರವುಗೊಳಿಸದೇ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣಕ್ಕೆ ₹1.12 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ಒಟ್ಟು ಹಲವು ಕಿಲೋಮೀಟರ್ ಉದ್ದದ ಬೇಲಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಯೋಜನೆಯ ಪ್ರಕಾರ ಲಿಂಗಾಪುರ ಗ್ರಾಮದ ಚಂದ್ರಪ್ಪ ಅವರ ತೋಟದಿಂದ ಹೂವಣ್ಣಗೌಡ ಅವರ ತೋಟದವರೆಗೆ 2,800 ಮೀಟರ್, ಹಳೇದಾನಿವಾಸ ಗ್ರಾಮದ ಚುಂಚನಮನೆ ಬ್ಲಾಕ್ ವ್ಯಾಪ್ತಿಯಲ್ಲಿ 1,350 ಮೀಟರ್, ದಾನಿವಾಸ ಗ್ರಾಮದ ಮುದುಕೂರಿನ ಅಮ್ಮದ್ ಅವರ ತೋಟದಿಂದ ವಿಠಲ ಗ್ರಾಮದ ಮಧು ಅವರ ತೋಟದವರೆಗೆ 4 ಕಿಲೋಮೀಟರ್, ವಿಠಲ ಗ್ರಾಮದ ಕೆಸವೆ ಕೋಗುವಿನಿಂದ ಆನೆ ಕೋಗುವರೆಗೆ 5,058 ಮೀಟರ್ ಹಾಗೂ ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಯ ಹಂಚಿನಕೊಡಿಗೆಯಿಂದ ತಮ್ಮಯ್ಯನ ತೋಟದವರೆಗೆ 745 ಮೀಟರ್ ಉದ್ದದ ಬೇಲಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗಳ ಪೈಕಿ ಮುದುಕೂರಿನಿಂದ ವಿಠಲ ಗ್ರಾಮದವರೆಗೆ 4 ಕಿಲೋಮೀಟರ್ ಉದ್ದದಲ್ಲಿ ನಡೆಯುತ್ತಿರುವ ಬೇಲಿ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂಬ ದೂರುಗಳು ಸ್ಥಳೀಯರಿಂದ ಕೇಳಿಬಂದಿವೆ.
ನೇರವಾಗಿ ಬೇಲಿ ನಿರ್ಮಾಣ ಮಾಡಬೇಕಾದಲ್ಲಿ ಅಂಕು–ಡೊಂಕಾಗಿ ನಿರ್ಮಿಸಲು ಮುಂದಾಗಿರುವುದು ಕೂಡ ಆತಂಕ ಮೂಡಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪ್ರತಿ 2 ಕಿಲೋಮೀಟರ್ಗೆ ಒಂದು ಸೋಲಾರ್ ವ್ಯವಸ್ಥೆ ಅಳವಡಿಸುವುದಾಗಿ ತಿಳಿಸಿದ್ದರೂ, ಗಿಡಗಂಟಿ ಮತ್ತು ಮರದ ಕೊಂಬೆಗಳನ್ನು ಸರಿಯಾಗಿ ತೆರವುಗೊಳಿಸದ ಕಾರಣ ಮಳೆ ಅಥವಾ ಗಾಳಿ ಬಂದಾಗ ಕೊಂಬೆಗಳು ಬಿದ್ದು ಬೇಲಿ ಮುರಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
