ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಅಡಿಕೆ ಮರಗಳನ್ನು ಕಳೆದುಕೊಂಡಿದ್ದ ಆಲ್ದೂರಿನ ರೈತರೊಬ್ಬರ ಬಳಿ ಅರಣ್ಯಾಧಿಕಾರಿ ಲಂಚ ಕೇಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಡಿಕೆ ಮರ ಕಳೆದುಕೊಂಡಿದ್ದಕ್ಕೆ ಪರಿಹಾರದ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆಯಲು ಅರಣ್ಯ ಇಲಾಖೆ ಅಧಿಕಾರಿ ಲಂಚ ಕೇಳಿದ್ದಾರೆ. ಕಣತಿ ಗ್ರಾಮದ ರೈತರೊಬ್ಬರು ಕಾಡಾನೆ ದಾಳಿಯಿಂದಾಗಿ 65 ಅಡಿಕೆ ಮರಗಳನ್ನು ಕಳೆದುಕೊಂಡಿದ್ದರು. ಈ ನಷ್ಟದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಿಸಬೇಕಾದ ಕಣತಿ ಬೀಟ್ನ ಡಿ.ಆರ್.ಎಫ್.ಓ. ಅಧಿಕಾರಿ ವೀರಭದ್ರ ನಾಯಕ್ ನೇರವಾಗಿ ರೈತನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಖರ್ಚಿಗೆ ಏನಾದ್ರೂ ಕೊಡ್ತೀನಿ ಅಂದ್ರೆ ಜಾಸ್ತಿ ಬರೆಯುತ್ತೇನೆ. ಇಲ್ಲಾಂದ್ರೆ 65 ಅಡಿಕೆ ಮರ ಎಂದೇ ಬರೆಯುತ್ತೇನೆ ಎಂದು ರೈತನಿಗೆ ಅಧಿಕಾರಿಯೇ ಆಮಿಷ ಒಡ್ಡಿದ್ದಾರೆ.
ಹಣ ನೀಡಿದರೆ ನಷ್ಟದ ಪ್ರಮಾಣವನ್ನು ಹೆಚ್ಚಿಸಿ ಬರೆದು ಹೆಚ್ಚಿನ ಪರಿಹಾರ ಕೊಡಿಸುವುದಾಗಿ, ಇಲ್ಲವಾದಲ್ಲಿ ಕೇವಲ ನೈಜ ನಷ್ಟವನ್ನಷ್ಟೇ ದಾಖಲಿಸುವುದಾಗಿ ಹೇಳಿದ್ದಾರೆ. ರೈತರಿಂದ ಹಣ ಸಿಗಬಹುದು ಎಂದು ಸುಮಾರು ಹತ್ತು ಸೆಕೆಂಡುಗಳ ಕಾಲ ಕಾದು ನೋಡಿದ ಅಧಿಕಾರಿ, ಲಂಚ ನೀಡಲು ರೈತ ಒಪ್ಪದಿದ್ದಾಗ ಕೊನೆಗೆ 65 ಮರಗಳ ನಷ್ಟವೆಂದೇ ದಾಖಲಿಸಿದ್ದಾರೆ. ಕಾಡಾನೆ ದಾಳಿಯಿಂದ ಬದುಕು ಕಳೆದುಕೊಳ್ಳುತ್ತಿರುವ ಮಲೆನಾಡಿನ ರೈತರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳಲು ಯತ್ನಿಸಿದ ಅಧಿಕಾರಿಯ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
