ಚಿಕ್ಕಮಗಳೂರು: ‘ಬಗರ್ ಹುಕುಂ ಸಾಗುವಳಿದಾರರಿಗೆ ತಿಂಗಳೊಳಗೆ ಹಕ್ಕುಪತ್ರ ನೀಡದಿದ್ದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೇ 1ರಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು’ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಖಂಡ ಗೌಸ್ ಮೊಹಿಯುದ್ದೀನ್ ಹೇಳಿದರು.

ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯ ಬಗರ್ ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ಹಕ್ಕು ಪ್ರತಿಪಾದಿಸುತ್ತಿರುವವರು ಭೂಮಿಯ ಹಕ್ಕಿಗಾಗಿ ಐದು ದಶಕಗಳಿಂದ ಕಾಯುತ್ತಿದ್ದು, ವಸತಿ ವಂಚಿತರು ಸೂರಿಗಾಗಿ ಕಾಯುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭೂರಹಿತರು ಫಾರಂ ನಂ. 50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದ್ದು, ಭೂಮಿ ಮಂಜೂರಾತಿ ಸಮಿತಿಯ ಬಳಿಗೆ, ಸ್ಥಳೀಯ ಶಾಸಕರು ಹಾಗೂ ತಹಶೀಲ್ದಾರರ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಅರ್ಜಿ ಸಲ್ಲಿಸಿದ ನಿರಾಶ್ರಿತರು ಸಮಸ್ಯೆಗಳನ್ನು ಹೇಳುತ್ತಿದ್ದರೂ, ಜನಪ್ರತಿನಿಧಿಗಳು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇನ್ನೊಂದೆಡೆ ಭೂರಹಿತರು ಸಾಗುವಳಿ ಮಾಡುವ ಭೂಮಿಗಳನ್ನು ಉದ್ಯಮಿಗಳಿಗೆ ಕೊಡಲಾಗುತ್ತಿದೆ. ಕಾರ್ಪೋರೇಟ್ ಕಂಪನಿಗಳಿಗೆ, ಶ್ರೀಮಂತರಿಗೆ ಭೂಮಿ ನೀಡಲು ಏಕ ಗವಾಕ್ಷಿ ಸ್ಥಾಪಿಸುವ ಸರ್ಕಾರಗಳು ಬಡವರ ಭೂಮಿ ಹಕ್ಕಿನ ಬಗ್ಗೆ ಹತ್ತಾರು ಕಾನೂನುಗಳ ನೆಪ ಹೇಳುತ್ತಿವೆ. ಇದು ಬಡವರ ವಿರೋಧಿಯಾದ ಮನಸ್ಥಿತಿ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಗಡಿಕಲ್, ಹಾದಿಹಳ್ಳಿ ಪುಟ್ಟಸ್ವಾಮಿ, ಸರೋಜ, ಟಿ.ಎಲ್.ಗಣೇಶ್, ಸಂದೀಪ್, ರಿತು, ಆಶಾ, ಮಲ್ಲೇಶ್ ಉಪಸ್ಥಿತರಿದ್ದರು.
