Friday, May 8, 2026
Homeಕ್ರೈಮ್ಕಸ ವಿಲೇವಾರಿ, ಫುಟ್ಬಾತ್ ಅತಿಕ್ರಮಣ, ಅಸ್ವಚ್ಛ ಆಹಾರ ಮಾರಾಟಕ್ಕೆ ಬಣಕಲ್ ಪೊಲೀಸರ ಎಚ್ಚರಿಕೆ

ಕಸ ವಿಲೇವಾರಿ, ಫುಟ್ಬಾತ್ ಅತಿಕ್ರಮಣ, ಅಸ್ವಚ್ಛ ಆಹಾರ ಮಾರಾಟಕ್ಕೆ ಬಣಕಲ್ ಪೊಲೀಸರ ಎಚ್ಚರಿಕೆ

ಕೊಟ್ಟಿಗೆಹಾರ : ಪಟ್ಟಣದಲ್ಲಿ ಹೆಚ್ಚುತ್ತಿರುವ ರಸ್ತೆ ಬದಿಯ ಕಸದ ರಾಶಿ, ಫುಟ್‌ಪಾತ್ ಅತಿಕ್ರಮಣ, ಅಸ್ವಚ್ಛ ಆಹಾರ ಮಾರಾಟ ಹಾಗೂ ಪಾರ್ಕಿಂಗ್ ಗಲಾಟೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಣಕಲ್ ಪೊಲೀಸರು ವಿಶೇಷ ಜಾಗೃತಿ ಅಭಿಯಾನ ನಡೆಸಿದರು.

ಬಣಕಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ದಿಲೀಪ್ ಕುಮಾರ್ ನೇತೃತ್ವದಲ್ಲಿ ಹತ್ತಾರು ಪೊಲೀಸರ ತಂಡ ಪಟ್ಟಣದ ಪ್ರಮುಖ ಹೋಟೆಲ್‌ಗಳು, ಅಂಗಡಿಗಳು ಹಾಗೂ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಸಾರ್ವಜನಿಕ ಸ್ವಚ್ಛತೆ ಮತ್ತು ಶಿಸ್ತು ಕಾಪಾಡುವ ಕುರಿತು ವ್ಯಾಪಾರಿಗಳಿಗೆ ಜಾಗೃತಿ ಮೂಡಿಸಿದೆ.

ಪಟ್ಟಣದ ವಿವಿಧ ಭಾಗಗಳಲ್ಲಿ ವ್ಯಾಪಾರಿಗಳು ಹಾಗೂ ಕೆಲ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವ ಪರಿಣಾಮ ರಸ್ತೆ ಬದಿಗಳಲ್ಲಿ ಕಸದ ರಾಶಿ ನಿರ್ಮಾಣವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಸವನ್ನು ನಿಗದಿತ ಸ್ಥಳಗಳಲ್ಲೇ ವಿಲೇವಾರಿ ಮಾಡುವಂತೆ ಪೊಲೀಸರು ಸೂಚಿಸಿದರು.

ಹೋಟೆಲ್ ಮತ್ತು ತಿಂಡಿ ಅಂಗಡಿಗಳಲ್ಲಿ ಬಜ್ಜಿ, ಬೋಂಡಾ, ಪಕೋಡ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಮುಚ್ಚದೇ ಇಟ್ಟು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಗುಣಮಟ್ಟದ ಆಹಾರ ನೀಡದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆ, ಆಹಾರ ಪದಾರ್ಥಗಳನ್ನು ಸ್ವಚ್ಛ ಹಾಗೂ ಸುರಕ್ಷಿತ ರೀತಿಯಲ್ಲಿ ಸಂರಕ್ಷಿಸಿ ಮಾರಾಟ ಮಾಡುವಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಯಿತು.
ಫುಟ್‌ಪಾತ್‌ಗಳಲ್ಲಿ ಎಳೆನೀರು ಸೇರಿದಂತೆ ವಿವಿಧ ವಸ್ತುಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫುಟ್‌ಪಾತ್ ತೆರವುಗೊಳಿಸಲು ಸೂಚಿಸಲಾಯಿತು.

ಇದೇ ವೇಳೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಪಾರ್ಕಿಂಗ್ ಸಮಸ್ಯೆಯೂ ಗಂಭೀರವಾಗುತ್ತಿದ್ದು, ಒಂದು ಹೋಟೆಲ್ ಎದುರು ವಾಹನ ನಿಲ್ಲಿಸಿ ಮತ್ತೊಂದು ಹೋಟೆಲ್ಗೆ ತೆರಳುವ ಗ್ರಾಹಕರೊಂದಿಗೆ ಕೆಲ ವ್ಯಾಪಾರಿಗಳು ವಾಗ್ವಾದ ನಡೆಸುತ್ತಿರುವ ಘಟನೆಗಳು ಕಂಡುಬಂದಿವೆ. ಗ್ರಾಹಕರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ ಅನಗತ್ಯ ಗಲಾಟೆಗಳನ್ನು ತಪ್ಪಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದರು.


“ಕೊಟ್ಟಿಗೆಹಾರ ಪ್ರವಾಸಿಗರ ಆಕರ್ಷಣೆಯ ಪಟ್ಟಣವಾಗಿದೆ. ಸ್ವಚ್ಛತೆ, ಶಿಸ್ತು ಹಾಗೂ ಉತ್ತಮ ಸೇವೆಯಿಂದ ಪಟ್ಟಣದ ಗೌರವ ಹೆಚ್ಚಿಸಬೇಕು,” ಎಂದು ಎಸ್‌ಐ ದಿಲೀಪ್ ಕುಮಾರ್ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!